
ಹುಬ್ಬಳ್ಳಿ: ‘ದೇಶದ ನ್ಯಾಯಾಂಗ ವ್ಯವಸ್ಥೆಗೆ ಧರ್ಮವೇ ಮೂಲ ಅಡಿಪಾಯ. ಧರ್ಮವಿಲ್ಲದೆ ನ್ಯಾಯವಿಲ್ಲ, ನ್ಯಾಯವಿಲ್ಲದೆ ಧರ್ಮವಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಹೇಳಿದರು.
ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರ ಮತ್ತು ಅದರ ಸಮಕಾಲೀನ ಪ್ರಸ್ತುತತೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಭಾರತದ ಪ್ರಾಚೀನ ನ್ಯಾಯಶಾಸ್ತ್ರ ಬೆಳವಣಿಗೆಗೆ ಕನ್ನಡಿಗ ವಿದ್ವಾಂಸರಾದ ವಿಜ್ಞಾನೇಶ್ವರ ಅವರ ಕೊಡುಗೆ ಅಪಾರವಾದದ್ದು. ಭಾರತೀಯ ನ್ಯಾಯಶಾಸ್ತ್ರಜ್ಞರು ನೈಜ ಬುದ್ಧಿ ಉಳ್ಳವರೇ ಹೊರತು ಕೃತಕ ಬುದ್ಧಿಯುಳ್ಳವರಲ್ಲ. ಪ್ರಾಚೀನ ನ್ಯಾಯ ಶಾಸ್ತ್ರಜ್ಞರು ಹಾಕಿಕೊಟ್ಟ ತಳಹದಿಯನ್ನು ಇಂದಿಗೂ ನ್ಯಾಯದಾನದ ವೇಳೆ ಅನುಸರಿಸಲಾಗುತ್ತಿದೆ’ ಎಂದರು.
ನವದೆಹಲಿ ಜೆಎನ್ಯು ಕಾನೂನು ಮತ್ತು ಆಡಳಿತ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪಿ.ಪುನೀತ್ ಮಾತನಾಡಿ, ‘ಭಾರತದ ನ್ಯಾಯಾಂಗ ವ್ಯವಸ್ಥೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಧರ್ಮ ಎಂಬುದು ಕೇವಲ ಪದವಲ್ಲ, ಅದು ಒಂದು ಪರಿಕಲ್ಪನೆ. ಇಂದಿನ ಎಲ್ಲ ವರ್ಗದ ಜನರ ಜೀವನದ ಮೂಲವೇ ಧರ್ಮ’. ಧರ್ಮವೇ ನ್ಯಾಯಶಾಸ್ತ್ರದ ಮೂಲ’ ಎಂದು ತಿಳಿಸಿದರು.
ಪ್ರೊ.ಜಿ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿಜ್ಞಾನೇಶ್ವರರ ಎಲ್ಲಾ ಉಲ್ಲೇಖಗಳು ಸಂವಿಧಾನದಲ್ಲಿ ಉಲ್ಲೇಖಗೊಂಡಿವೆ. ಭಾರತವು ಶ್ರೀಮಂತ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಹೊಂದಿದ್ದು, ಇವುಗಳು ಸಮಸಮಾಜ ನಿರ್ಮಿಸಲು ಸಹಕಾರಿಯಾಗಿವೆ’ ಎಂದರು.
ಕುಲಸಚಿವರಾದ ಪ್ರೊ ರತ್ನಾ ಆರ್.ಭರಮಗೌಡರ್, ಗೀತಾ ಕೌಲಗಿ ಇದ್ದರು. ವಿಶ್ವವಿದ್ಯಾಲಯ ವ್ಯಾಪ್ತಿಯ 60ಕ್ಕೂ ಹೆಚ್ಚು ಕಾನುನು ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.