ಧಾರವಾಡ: ಶ್ರೇಷ್ಠ ಪ್ರದರ್ಶನ ನೀಡಿದ ಮಂಗಳೂರು ಬಾಲಕರ ಹಾಗೂ ಬಾಲಕಿಯರ ತಂಡದವರು ಇಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್ನಲ್ಲಿ ಮಂಗಳೂರು ತಂಡ 57–51 ಅಂಕಗಳಿಂದ ಧಾರವಾಡ ತಂಡವನ್ನು ಸೋಲಿಸಿತು. ಮಂಗಳೂರು ತಂಡ ಮೊದಲರ್ಧದ ಅಂತ್ಯಕ್ಕೆ 27–22ರಲ್ಲಿ ಮುನ್ನಡೆ ಗಳಿಸಿತ್ತು. ಎರಡನೇ ಅವಧಿಯಲ್ಲಿಯೂ ಉತ್ತಮ ಪೈಪೋಟಿ ಕಂಡುಬಂದರೂ, ಮಂಗಳೂರು ತಂಡದ ಆಟಗಾರರು ಚುರುಕಿನ ಪ್ರದರ್ಶನ ನೀಡಿದರು. ಈ ತಂಡದ ವಿಶಾಲಗೌಡ ಗಮನ ಸೆಳೆದರು.
ಸೆಮಿಫೈನಲ್ ಪಂದ್ಯಗಳಲ್ಲಿ ಧಾರವಾಡ 25–21ರಲ್ಲಿ ಬೆಂಗಳೂರು ದಕ್ಷಿಣ ತಂಡದ ಮೇಲೂ, ಮಂಗಳೂರು 49–21ರಲ್ಲಿ ತುಮಕೂರು ತಂಡದ ವಿರುದ್ಧವೂ ಗೆಲುವು ಪಡೆದಿದ್ದವು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮಂಗಳೂರು ತಂಡ 15–11 ಅಂಕಗಳಿಂದ ಮಂಡ್ಯ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಮಂಗಳೂರು ತಂಡ ಮೊದಲರ್ಧದ ಅಂತ್ಯಕ್ಕೆ ಗಳಿಸಿದ್ದ 9–6ರ ಮುನ್ನಡೆಯನ್ನು ಎರಡನೇ ಅವಧಿಯಲ್ಲಿಯೂ ಕಾಯ್ದುಕೊಂಡಿತು. ಚಾಂಪಿಯನ್ ತಂಡದ ಪಲ್ಲವಿ ಹಾಗೂ ಭುವನೇಶ್ವರಿ ಗಮನಾರ್ಹ ಪ್ರದರ್ಶನ ನೀಡಿದರು.
ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಮಂಗಳೂರು ತಂಡ 10–6 ಅಂಕಗಳಿಂದ ಉಡುಪಿ ತಂಡದ ಮೇಲೂ, ಮಂಡ್ಯ ತಂಡ 25–15ರಲ್ಲಿ ಧಾರವಾಡದ ವಿರುದ್ಧವೂ ಗೆಲುವು ಸಾಧಿಸಿ ಫೈನಲ್ ತಲುಪಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.