ಹುಬ್ಬಳ್ಳಿ: ಮಹಾದಾಯಿ ನ್ಯಾಯ ಮಂಡಳಿ ತೀರ್ಪು ಬಂದ ನಂತರ ಕಳಸಾ– ಬಂಡೂರಿ ಯೋಜನೆ ಜಾರಿಗೆ ಕೈಗೊಂಡಿರುವ ಕ್ರಮಗಳೇನು? ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿಯಲ್ಲೇನಿದೆ ಹಾಗೂ ಯಾವ ವಿಷಯಗಳಿಗೆ ಸ್ಪಷ್ಟೀಕರಣ ಕೇಳಲಾಗಿದೆ ಎಂಬುದರ ಬಗ್ಗೆ ವಿವರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಕಳಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನಿರ್ಧರಿಸಿದೆ.
ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿದ ಸಮಿತಿ ಸಂಚಾಲಕ ವಿಕಾಸ ಸೊಪ್ಪಿನ, ನ್ಯಾಯ ಮಂಡಳಿ ತೀರ್ಪು ಬಂದು ಈಗಾಗಲೇ ಏಳು ತಿಂಗಳು ಕಳೆದಿದೆ. ಆದರೆ ಈ ವರೆಗೆ ಆಗಿರುವ ಪ್ರಗತಿ ಏನು, ತೀರ್ಪಿನ ಬಗ್ಗೆ ಸರ್ಕಾರದ ನಿಲುವು ಹಾಗೂ ಮೇಲ್ಮನವಿ– ಸ್ಪಷ್ಟೀಕರಣ ಕೇಳಿ ಸಲ್ಲಿರುವ ಅರ್ಜಿಯಲ್ಲಿ ಏನಿದೆ ಎಂದು ಜನರಿಗೆ ಹಾಗೂ ಹೋರಾಟಗಾರರಿಗೆ ಗೊತ್ತಿಲ್ಲ. ಆದ್ದರಿಂದ ಸರ್ಕಾರ ಮತ್ತು ಜಲ ಸಂಪನ್ಮೂಲ ಸಚಿವರಿಗೆ ಎರಡು ದಿನಗಳಲ್ಲಿ ಪತ್ರ ಬರೆಯಲಾಗುವುದು. ಮುಖ್ಯಮಂತ್ರಿ ಅವರನ್ನು ಸಹ ಭೇಟಿ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಕೆಲವರು ಕೇಳುತ್ತಿದ್ದಾರೆ. ಗೋವಾ ಸಹ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಲ್ಲದೇ ಗೋವಾ ನ್ಯಾಯಾಧೀಕರಣದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ. ನ್ಯಾಯಾಧೀಕರಣದ ಅನ್ವಯ ಮುಂದುವರೆದರೆ ಒಂದೇ ಒಂದು ಹನಿ ನೀರು ಸಹ ಸಿಗುವುದಿಲ್ಲ. ಆದ್ದರಿಂದ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದರು.
ಬಜೆಟ್ನಲ್ಲಿ ಈ ಯೋಜನೆಗೆ ಒಂದೇ ಒಂದು ಪೈಸೆ ಹಣ ಮೀಸಲಿಟ್ಟಿಲ್ಲ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಒಂದೇ ತಿಂಗಳಲ್ಲಿ ₹ 550 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಯಿತು. ಆದರೆ ಕಳಸಾ– ಬಂಡೂರಿ ಬಗ್ಗೆ ಏಕೆ ಇಷ್ಟು ನಿರ್ಲಕ್ಷ್ಯಎಂದು ಗೊತ್ತಾಗುತ್ತಿಲ್ಲ. ವಿರೋಧ ಪಕ್ಷದವರು ಸಹ ಈ ವಿಷಯದಲ್ಲಿ ಮಾತನಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಸುರೇಶ ಪಾಟೀಲ, ರವಿ ಬೇಜವಾಡ, ಶೇಖರಯ್ಯ ಮಠಪತಿ, ಸಂಜಯ ಪಾಟೀಲ, ಗುರುನಗೌಡ ಭೀಮನಗೌಡ್ರ, ನಾಗಭೂಷಣ್ ಕಾಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.