ಧಾರವಾಡ: ‘ನಾನು ನಿಮ್ಮ ಒಕ್ಕೂಟದ ನಾಯಕ ಎಂದುಕೊಳ್ಳಿ. ಕಾರ್ಮಿಕರ ಹಾಗೂ ವಿವಿಧ ಸಂಘಟನೆಗಳ ಮುಷ್ಕರವನ್ನು ಬಗೆಹರಿಸಿದ ಒಂದಷ್ಟು ಅನುಭವ ನನಗೂ ಇದೆ. 12 ದಿನಗಳ ಒಳಗೆ ನಿಮ್ಮ ಸಮಸ್ಯೆಗೆ ಪರಿಹಾರ ಕೊಡಿಸಲಾಗುವುದು’
ಹೀಗೆಂದು ಹೇಳಿದವರು ರಾಜ್ಯಪಾಲ ಥಾವರಚಂದ ಗೆಹಲೋತ್. ಇಲ್ಲಿನ ಕೃಷಿ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಅವರು, ಮುಷ್ಕರ ನಿರತ ಬೋಧಕ ಸಿಬ್ಬಂದಿಯ ಪೆಂಡಾಲಿಗೆ ನೇರವಾಗಿ ಭೇಟಿ ನೀಡಿ ಅಹವಾಲು ಆಲಿಸಿದರು.
‘ಒಂದು ತಿಂಗಳ ಹಿಂದೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ಆಗಲೇ ನಿಮ್ಮ ಅಹವಾಲು ಸಲ್ಲಿಸಿದ್ದರೆ, ಇಷ್ಟು ಹೊತ್ತಿಗೆ ನಿಮ್ಮ ಬಹುತೇಕ ಬೇಡಿಕೆಗಳು ಈಡೇರುತ್ತಿದ್ದವು. ಬೆಂಗಳೂರಿಗೆ ಹೋದ ತಕ್ಷಣ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಸರ್ಕಾರದ ಪ್ರತಿನಿಧಿಗಳು ಹಾಗೂ ಒಕ್ಕೂಟದ ಮುಖಂಡರನ್ನು ಸೇರಿಸಿ ಸಭೆ ನಡೆಸಲಾಗುವುದು. ಅಲ್ಲಿ ಶಿಕ್ಷಕರ ಸಮಸ್ಯೆ ಪರಿಹರಿಸಲಾಗುವುದು. ಸದ್ಯಕ್ಕೆ ಮುಷ್ಕರ ಕೈಬಿಟ್ಟು, ತರಗತಿಗೆ ತೆರಳಿ’ ಎಂದರು.
ಸಿಎಎಸ್–2006ರ ಅಡಿಯಲ್ಲಿ ನಿಗದಿತ ದಿನಾಂಕದಿಂದ ಬಡ್ತಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿಆಡಳಿತ ಭವನದ ಎದುರೇ ಪೆಂಡಾಲು ಹಾಕಿ ಕಳೆದ 15 ದಿನಗಳಿಂದ ಶಿಕ್ಷಕರು ಮುಷ್ಕರ ನಡೆಸುತ್ತಿದ್ದರು. ಸರ್ಕಾರ ಹಾಗೂ ಆಡಳಿತ ಮಂಡಳಿ ಹಂತದಲ್ಲಿನ ಭೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿದ್ದರು.ಶಿಕ್ಷಕರ ಕಲ್ಯಾಣ ಸಂಘದಅಧ್ಯಕ್ಷಡಾ.ಐ.ಕೆ.ಕಾಳಪ್ಪನವರ ಹಾಗೂಕಾರ್ಯದರ್ಶಿ ಡಾ.ಮಹಾಂತೇಶ ನಾಯಕ್ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಕುರಿತು ರಾಜ್ಯಪಾಲರಿಗೆ ವಿವರಿಸಿದರು.
ಎಲ್ಲವನ್ನೂ ಸಮಾಧಾನವಾಗಿ ಆಲಿಸಿದ ರಾಜ್ಯಪಾರ ಗೆಹಲೋತ್, ಪರಿಹರಿಸುವ ಭರವಸೆ ನೀಡಿದ ನಂತರ ಶಿಕ್ಷಕರ ಮುಷ್ಕರ ಕೈಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.