
ನವಲಗುಂದ: ಹಲವು ಹಿರಿಯರ ತ್ಯಾಗ, ಪರಿಶ್ರಮದಿಂದ ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ತನು ಕನ್ನಡ, ನುಡಿ ಕನ್ನಡ, ಮನ ಕನ್ನಡ ಕನ್ನಡ ನಮ್ಮ ಉಸಿರಾಗಿರಲಿ. ಕನ್ನಡಾಭಿಮಾನವನ್ನು ಪ್ರತಿದಿನ, ಪ್ರತಿ ಕ್ಷಣ ಬೆಳೆಸಿಕೊಂಡಾಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಮತ್ತಷ್ಟು ಗೌರವ ಬರುತ್ತದೆ. ಕನ್ನಡವನ್ನು ಎಲ್ಲರೂ ಉಳಿಸಿ ಬೆಳೆಸೋಣ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿಬಾಯಿ ಪೂಜಾರ, ಇಮಾಮಸಾಬ ವಲ್ಲೆಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಪರ ಹೋರಾಟಗಾರರಾದ ಉಮೇಶ ನವಲಗುಂದ, ಶಿರಾಜ್ ಧಾರವಾಡ, ವಿಕ್ರಂ ಕುರಿ ಮಾತನಾಡಿ, ನಾಡ ನುಡಿ ಜಲ ಭಾಷೆ ವಿಷಯದಲ್ಲಿ ನಾವೆಲ್ಲರೂ ಒಂದಾಗಿರಬೇಕು ಎಂದರು.
ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ನಾಡು ಕನ್ನಡ ಸಂಸ್ಕೃತಿ ಮತ್ತು ಪರಂಪರೆಯು ಭೂಮಿ, ನೀರು, ಜನ, ಜೀವನ, ಕಲೆ, ಸಂಗೀತ ಮತ್ತು ಜಾನಪದವನ್ನು ಒಳಗೊಂಡಿದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿಯೂ ಪ್ರತಿದಿನ ಕನ್ನಡ ಪಠ್ಯಗಳನ್ನು ಓದಿಸುವ ಮೂಲಕ ಕನ್ನಡಾಭಿಮಾನ ಬೆಳಸಲಿ ಕನ್ನಡ ಸಂಸ್ಕೃತಿ ಸದಾ ಬೆಳಗಲಿ ಎಂದು ಆಶೀರ್ವಚನ ನೀಡಿದರು.
ನಾಟ್ಯ ಮಯೂರಿ ಸಂಘದಿಂದ ಜರುಗಿದ ಸಂಸ್ಕೃತಿ ಕಾರ್ಯಕ್ರಮಗಳಿಗೆ ಅಣ್ಣಿಗೇರಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಭಾವಿ ಚಾಲನೆ ನೀಡಿದರು. ಮಹಮ್ಮದಅಲಿ ಹಂಚಿನಾಳ ಕನ್ನಡಗೀತೆ ಹಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜ್ಯೋತ್ಸವ ಮೆರವಣಿಗೆ ನಡೆಯಿತು.
ತಹಶೀಲ್ದಾರ ಸುಧೀರ ಸಾವಕಾರ,ರೈತ ಮುಖಂಡರಾದ ದೇವರಾಜ ದಾಡಿಭಾವಿ, ಶಿದ್ದಯ್ಯ ಹಿರೇಮಠ, ಶಿವಾನಂದ ಕರಿಗಾರ, ಶಂಕರಪ್ಪ ಅಂಬಲಿ, ಎಸ್ ಬಿ ಪಾಟೀಲ, ರಘುನಾಥ ನಡುವಿನಮನಿ, ಮಬೂಸಾಬ ಯರಗುಪ್ಪಿ, ನಂದಿನಿ ಹಾದಿಮನಿ, ಶರಣು ಯಮನೂರ, ನಿಂಗಪ್ಪ ಕೆಳಗೇರಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.