ಹುಬ್ಬಳ್ಳಿ: ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಅ. 17ರಿಂದ 21ರ ವರೆಗೆ ನಡೆಯಲಿರುವ 40ನೇ ಹಿರಿಯರ ಮತ್ತು 27ನೇ ಕಿರಿಯರ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ಗೆ ಕರ್ನಾಟಕದ ಮೂವರು ಸೈಕ್ಲಿಸ್ಟ್ಗಳು ಹಾಗೂ ಒಬ್ಬ ತಾಂತ್ರಿಕ ಸಿಬ್ಬಂದಿ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ಇತ್ತೀಚಿಗೆ ನಡೆದ ಟ್ರಯಲ್ಸ್ನಲ್ಲಿ 32 ಸೈಕ್ಲಿಸ್ಟ್ಗಳನ್ನು ಒಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಲಾಯಿತು.
ಇದರಲ್ಲಿ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ವೆಂಕಪ್ಪ ಕೆಂಗಲಗುತ್ತಿ, ವಿಜಯಪುರದ ಸಹನಾ ಕುಡಿಗಾನೂರ ಮತ್ತು ಬೆಂಗಳೂರಿನ ಕೀರ್ತಿ ರಂಗಸ್ವಾಮಿ ಆಯ್ಕೆಯಾಗಿದ್ದಾರೆ. ಜಮಖಂಡಿ ತಾಲ್ಲೂಕಿನ ಸನಾಳ ಗ್ರಾಮದ ಪೈಗಂಬರ್ ನದಾಫ್ ಮೆಕ್ಯಾನಿಕ್ ಆಗಿ ಆಯ್ಕೆಯಾದರು. ಭಾರತ ತಂಡ ಅ. 13ರಂದು ನವದೆಹಲಿಯಿಂದ ಸಿಯೋಲ್ಗೆ ಪ್ರಯಾಣ ಬೆಳೆಸಲಿದೆ.
ಸೀನಿಯರ್ ವಿಭಾಗದ ಟೀಮ್ ಪರ್ಸೂಟ್ ಮತ್ತು ಮಾಸ್ಡ್ ಸ್ಟಾರ್ಟ್ ವಿಭಾಗದಲ್ಲಿ ವೆಂಕಪ್ಪ ಪಾಲ್ಗೊಳ್ಳಲಿದ್ದಾರೆ. ಈ ಸೈಕ್ಲಿಸ್ಟ್ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿರುವುದು ಇದು ನಾಲ್ಕನೇ ಬಾರಿ. 2018ರಲ್ಲಿ ಸ್ವಿಟ್ಜರ್ಲೆಂಡ್ ಹಾಗೂ ಮಲೇಷ್ಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇದೇ ವರ್ಷ ಇಂಡೊನೇಷ್ಯಾದಲ್ಲಿ ಜರುಗಿದ ಟೂರ್ನಿಯಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿದ್ದರು. ಸಹನಾ ಮತ್ತು ಕೀರ್ತಿ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.