ಹುಬ್ಬಳ್ಳಿ: ಇಲ್ಲಿನ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯ ನಿರ್ದೇಶಕ ಹುದ್ದೆಗೇರಲು ಭಾರೀ ಲಾಭಿ ನಡೆದಿದೆ.
ಹಾಲಿ ನಿರ್ದೇಶಕ(ಪ್ರಭಾರ) ಡಾ.ರಾಮಲಿಂಗಪ್ಪ ಅಂಟರತಾನಿ, ಪ್ರಾಂಶುಪಾಲ ಡಾ.ಎಂ.ಸಿ.ಚಂದ್ರು, ಡಾ.ಕೆ.ಎಫ್.ಕಮ್ಮಾರ್, ಡಾ.ಗುರುಶಾಂತಪ್ಪ ಯಲಗಚ್ಚಿನ್, ಡಾ.ಪ್ರಕಾಶ ವಾರಿ, ಡಾ.ಸವಿತಾ ಕನಕಪುರ, ಡಾ.ಕಸ್ತೂರಿ ದೋಣಿಮಠ, ಡಾ.ಸೂರ್ಯಕಾಂತ ಕಲ್ಲೂರಾಯ, ಡಾ. ದೊಡ್ಡಮನಿ ಸೇರಿದಂತೆ ಒಂಬತ್ತು ಆಕಾಂಕ್ಷಿಗಳು ಇದುವರೆಗೆ ಅರ್ಜಿ ಸಲ್ಲಿಸಿದ್ದಾರೆ. ನ.8 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಿದವರಲ್ಲಿ ಐದು ಮಂದಿಯನ್ನು ನ.14ರಂದು ನಡೆಯುವ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರೊಪೆಸರ್ ಆಗಿ ಐದು ವರ್ಷ ಕಾರ್ಯ ನಿರ್ವಹಿಸಿರುವ ಮತ್ತು ಆಡಳಿತ ಅನುಭವ ಇರುವವರು, ಎಚ್ಒಡಿ, ಮೆಡಿಕಲ್ ಸೂಪರಿಟೆಂಡೆಂಟ್, ಪ್ರಾಂಶುಪಾಲರಾಗಿ, ನಿರ್ದೇಶಕಾಗಿ ಕಾರ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಡಾ.ರಾಮಲಿಂಗಪ್ಪ ಅಂಟರತಾನಿ, ‘ಒಂದು ವರ್ಷದಿಂದ ಪ್ರಭಾರ ನಿರ್ದೇಶಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸಿಬ್ಬಂದಿ, ಜನಪ್ರತಿನಿಧಿಗಳ ಸಹಕಾರದಿಂದ ಕಿಮ್ಸ್ ಸುಧಾರಣೆಗೆ ಆದ್ಯತೆ ನೀಡಿದ್ದೇನೆ. ಇನ್ನೂ ಮಾಡಬೇಕಿರುವ ಕೆಲಸಗಳು ಸಾಕಷ್ಟು ಇವೆ. ನನ್ನ ಬಗ್ಗೆ ಯಾವುದೇ ದೂರುಗಳಿಲ್ಲ. ಅವಕಾಶ ಸಿಗುವ ನಿರೀಕ್ಷೆಯಲ್ಲಿ ಇದ್ದೇನೆ’ ಎಂದು ಹೇಳಿದರು.
ಮತ್ತೊಬ್ಬ ಆಕಾಂಕ್ಷಿ ಡಾ.ಕೆ.ಎಫ್.ಕಮ್ಮಾರ್, ‘ನಾಲ್ಕು ವರ್ಷ ಪ್ರಾಂಶುಪಾಲನಾಗಿ ಹಾಗೂ ಕೆಲವು ದಿನ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಇದೆ. ಇದೇ ಕಾಲೇಜಿನಲ್ಲಿ ಕಲಿತು, ಇಲ್ಲಿಯೇ ಕಾರ್ಯನಿರ್ವಹಿಸಿದ್ದು, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶವಿದೆ. ಅವಕಾಶ ಸಿಗಬಹುದು ಎಂಬ ಆಶಯ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.