ADVERTISEMENT

‘ರೈತರು ಉದ್ಯಮಿಗಳಂತೆ ಯೋಚಿಸಲಿ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 11:37 IST
Last Updated 5 ಅಕ್ಟೋಬರ್ 2021, 11:37 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಬಿಯಾಂಡ್ ಬೆಂಗಳೂರು ’ಇನ್ನೊವೇಷನ್‌ ಅಂಡ್‌ ಇಂಪ್ಯಾಕ್ಟ್ ಹುಬ್ಬಳ್ಳಿ‘ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಬಿಯಾಂಡ್ ಬೆಂಗಳೂರು ’ಇನ್ನೊವೇಷನ್‌ ಅಂಡ್‌ ಇಂಪ್ಯಾಕ್ಟ್ ಹುಬ್ಬಳ್ಳಿ‘ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು   

ಹುಬ್ಬಳ್ಳಿ: ಶ್ರಮಪಟ್ಟು ದುಡಿಯುವ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವಾಗ ಉದ್ಯಮಿಗಳ ರೀತಿಯಲ್ಲಿ ಹೆಚ್ಚಿನ ಲಾಭದ ಬಗ್ಗೆ ಯೋಚನೆ ಮಾಡಬೇಕು ಎಂದು ಕೃಷಿಕಲ್ಪ ಸಂಸ್ಥೆಯ ಸಿಇಒ ಸಿ.ಎಂ. ಪಾಟೀಲ ಹೇಳಿದರು.

ಬಿಯಾಂಡ್ ಬೆಂಗಳೂರು ’ಇನ್ನೊವೇಷನ್‌ ಅಂಡ್‌ ಇಂಪ್ಯಾಕ್ಟ್ ಹುಬ್ಬಳ್ಳಿ‘ ಕಾರ್ಯಕ್ರಮದ ’ಕೃಷಿಯಲ್ಲಿ ತಂತ್ರಜ್ಞಾನದ ಸೇವೆ; ಹೊಸತನ’ ವಿಷಯದ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು ’ಇಳುವರಿ ಬಂದಾಗ ರೈತರು ತುರ್ತು ಹಣಕಾಸಿನ ಅಗತ್ಯಕ್ಕಾಗಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಶ್ರಮಕ್ಕೆ ತಕ್ಕಷ್ಟು ಬೆಲೆ ಸಿಗುತ್ತಿಲ್ಲ. ಆದ್ದರಿಂದ ರೈತರು ತಾಳ್ಮೆಯಿಂದ ಉದ್ಯಮಿಗಳ ರೀತಿಯಲ್ಲಿ ಯೋಚಿಸಬೇಕು. ಮಾರುಕಟ್ಟೆ ಸಂಪರ್ಕ ಬೆಳೆಸಿಕೊಳ್ಳಬೇಕು. ಇಳುವರಿಯ ಮೌಲ್ಯ ಹೆಚ್ಚಿಸಲು ಯೋಜನೆ ರೂಪಿಸಬೇಕು’ ಎಂದರು.

’ತಂತ್ರಜ್ಞಾನದ ಬಳಕೆ ಕೆಲ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದು, ಇದರ ವ್ಯಾಪ್ತಿ ಕೃಷಿ ಕ್ಷೇತ್ರಕ್ಕೂ ವ್ಯಾಪಕವಾಗಿ ವಿಸ್ತಾರವಾಗಬೇಕು. ಉತ್ತರ ಕರ್ನಾಟಕದಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದ್ದು, ಇದನ್ನು ಬಳಸಿಕೊಳ್ಳಬೇಕು’ ಎಂದರು.

ADVERTISEMENT

ವರ್ಚುವಲ್‌ ಮೂಲಕ ಪಾಲ್ಗೊಂಡ ‌ಇಆರ್‌ಜಿಒ ಸಂಸ್ಥೆಯ ಸಂಸ್ಥಾಪಕ ಕಿಶೋರ ಝಾ ‘ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ರೈತ ಬ್ಯಾಂಕ್‌ಗಳನ್ನು ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ಕೆನ್‌ ಅಗ್ರಿಟೆಕ್‌ನ ನಿರ್ದೇಶಕ ವಿವೇಕ ನಾಯಕ ’ಉತ್ತಮ ಗುಣಮಟ್ಟ ನೀಡುವುದು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಮತ್ತು ನಿಗದಿತ ಸಮಯದಲ್ಲಿ ಗ್ರಾಹಕರಿಗೆ ತಲುಪಿಸುವ ವಿಚಾರದಲ್ಲಿ ಯಾವಾಗಲೂ ಮುಂದಿರಬೇಕು. ಬಾಳೆಹಣ್ಣು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯತ್ತಿದ್ದರೂ ರಫ್ತು ಮಾಡುವ ಪ್ರಮಾಣ ಕಡಿಮೆಯಿದೆ. ರಫ್ತಿನಲ್ಲಿಯೂ ದೊಡ್ಡ ಸಾಧನೆ ಮಾಡಬೇಕು’ ಎಂದು ಹೇಳಿದರು.‌

ವೈಡ್‌ಮೊಬಿಲಿಟಿ ಸಂಸ್ಥೆಯ ಸಹ ಸಂಯೋಜಕಿ ರೋಹಿಣಿ, ಜೈಫರ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಗಿರೀಶ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.