ADVERTISEMENT

‘ಸುಸ್ಥಿರ ಅಭಿವೃದ್ಧಿಗೆ ಪಾಲಿಕೆ ಮುಂದಾಗಲಿ‘– ಅನಂತ ಹೆಗಡೆ ಆಶೀಸರ

ಜೀವವೈವಿಧ್ಯ ಅಭಿಯಾನ ಸಭೆಯಲ್ಲಿ ಅನಂತ ಹೆಗಡೆ ಆಶೀಸರ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:15 IST
Last Updated 16 ಜುಲೈ 2021, 17:15 IST
ಹುಬ್ಬಳ್ಳಿಯ ಪಾಲಿಕೆ ಸಭಾಭವನದಲ್ಲಿ ಶುಕ್ರವಾರ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸಭೆ ನಡೆಸಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಇದ್ದಾರೆ
ಹುಬ್ಬಳ್ಳಿಯ ಪಾಲಿಕೆ ಸಭಾಭವನದಲ್ಲಿ ಶುಕ್ರವಾರ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸಭೆ ನಡೆಸಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಇದ್ದಾರೆ   

ಹುಬ್ಬಳ್ಳಿ: ‘ನೃಪತುಂಗ ಬೆಟ್ಟ ನಿಧಾನವಾಗಿ ಕ್ಷೀಣಿಸುತ್ತಿದ್ದು, ಅದನ್ನು ರಕ್ಷಿಸಿ–ಅಲ್ಲಿರುವ ಜೀವ ವೈವಿಧ್ಯದ ಸುಸ್ಥಿರತೆ ಕಾಪಾಡಲು ಮಹಾನಗರ ಪಾಲಿಕೆ ಮುಂದಾಗಬೇಕು’ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಪಾಲಿಕೆ ಆಯುಕ್ತರ ಸಭಾಂಗಣದಲ್ಲಿ ಶುಕ್ರವಾರ ಜೀವ ವೈವಿಧ್ಯ ಅಭಿಯಾನದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಗುರುತಿಸಿ, ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ಹಾಗೆ ಅಭಿವೃದ್ಧಿಗೊಳಿಸಬೇಕು. ಕೆರೆ ಕುರಿತು ಅಧ್ಯಯನ ನಡೆಸಿದ ತಜ್ಞರ ಸಲಹೆ ಆಧರಿಸಿ ಅಭಿವೃದ್ಧಿಗೆ ಮುಂದಾಗಬೇಕು. ಪರಿಸರ, ಪ್ರವಾಸೋದ್ಯಮ ಅಳವಡಿಸಿಕೊಂಡು, ಸ್ಥಳೀಯ ಮಣ್ಣಿಗೆ ಹೊಂದಿಕೊಳ್ಳುವಂಥ ಗಿಡಗಳನ್ನು ಬೆಳೆಸಬೇಕು’ ಎಂದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಎಲ್ಲವೂ ಕಾಂಕ್ರೀಟ್‌ಮಯವಾಗಿದ್ದು, ಜೀವ ವೈವಿಧ್ಯದ ಬೆಳವಣಿಗೆಗೆ ಅವಕಾಶವಿಲ್ಲದಂತಾಗಿದೆ. ಸಾಧ್ಯವಾದಲ್ಲೆಲ್ಲ ಹಸಿರು ಬೆಳೆಸಿ, ಉದ್ಯಾನ ನಿರ್ಮಿಸಬೇಕು. ಎರಡು ದಶಕಗಳ ಹಿಂದೆ ರಸ್ತೆ ಅಂಚಿಗೆ ಸಾಕಷ್ಟು ಮರ–ಗಿಡಗಳು ಹುಲುಸಾಗಿ ಬೆಳೆದಿದ್ದವು. ಅಭಿವೃದ್ಧಿ ಕಾಮಗಾರಿಗಳಿಂದ ಮರ–ಗಿಡಗಳೇ ಕಾಣುತ್ತಿಲ್ಲ. ಇದಕ್ಕಾಗಿ ಪಾಲಿಕೆ ಗ್ರೀನ್‌ ಬಜೆಟ್‌ ಮಂಡಿಸಿ, ಪರಿಸರ ಸಮತೋಲನಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್‌, ‘ತೋಳನಕೆರೆ ಮುಂಭಾಗದ ಎರಡು ಎಕರೆ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ನಿರ್ಧರಿಸಲಾಗಿದೆ. ನಗರದ ವಿವಿಧೆಡೆ 50 ಸಾವಿರ ಗಿಡಗಳನ್ನು ನೆಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ 524 ಉದ್ಯಾನಗಳಿದ್ದು, 120 ಉದ್ಯಾನ ಅಭಿವೃದ್ಧಿಯಾಗಿವೆ. 35 ಕೆರೆಗಳಿದ್ದು, ನಾಲ್ಕು ಕೆರೆ ಅತಿಕ್ರಮಣವಾಗಿವೆ. ಪ್ರತಿ ತಿಂಗಳು ಒಂದೊಂದು ಕೆರೆ ಒತ್ತುವರಿ ತೆರವುಗೊಳಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಪರಿಸರ ವಿಜ್ಞಾನಿ ಕೇಶವ ಕೂರ್ಸೆ, ಪಂಚಾಕ್ಷರಿ ಹಿರೇಮಠ, ಶಂಕರ ಕೆ., ಗೀತಾ ಬೆಲ್ಲದ, ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.