ನವಲಗುಂದ: ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ತಾಲ್ಲೂಕಿನ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕೆಲ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಅಂತಹ ಫಲಾನುಭವಿಗಳ ಅರ್ಜಿಗಳನ್ನು ನಿಯಮಾನುಸಾರ ಪರಿಗಣಿಸಿ, ಲಾಭ ದೊರೆಯುವಂತೆ ಮಾಡಬೇಕು’ ಎಂದರು.
ಗ್ಯಾರಂಟಿ ಯೋಜನೆಗಳ ಲಾಭ ಪಡೆದ ಫಲಾನುಭವಿಗಳ ಅನಿಸಿಕೆಗಳ ಯಶೋಗಾಥೆಗಳ ಪ್ರಚಾರ ಕೈಗೊಳ್ಳಬೇಕು ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯ ಈರಣ್ಣ ಶಿಡಗಂಟಿ ಮಾತನಾಡಿ, ‘ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೆ ಫಲಾನುಭವಿಗಳಾಗಿ ಅದರ ಲಾಭ ಪಡೆಯುತ್ತಿದ್ದ ಮನೆಯ ಯಜಮಾನಿ ಮರಣ ಹೊಂದಿದ್ದಲ್ಲಿ ಅವರ ಮುಂದಿನ ಉತ್ತರದಾಹಿಗಳನ್ನು ಯಜಮಾನಿಯನ್ನಾಗಿಸಲು ಬಿ.ಪಿ.ಎಲ್ ಕಾರ್ಡ್ ತಿದ್ದುಪಡಿಗೆ ಕೊಟ್ಟಿದ್ದರೂ ಅವುಗಳ ತಿದ್ದುಪಡಿಯಾಗದೇ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಇವುಗಳ ತಿದ್ದುಪಡಿಯಾಗಬೇಕಿದೆ‘ ಎಂದರು.
ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಸಿಡಿಪಿಒ ಗಾಯತ್ರಿ ಪಾಟೀಲ, ಟಿ.ಎಲ್. ಮುತ್ತನವರ, ಈರಣ್ಣ ಶಿಡಗಂಟಿ, ಕರಿಯಪ್ಪ ಕೋಟುರ, ಯಲ್ಲಪ್ಪ ಗಾಣಿಗೇರ ಸೇರಿದಂತೆ ಪಂಚ ಗ್ಯಾರಂಟಿ ಸಮಿತಿ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.