ADVERTISEMENT

ಲವ್‌ ಜಿಹಾದ್‌ ಪ್ರತೀಕಾರಕ್ಕೆ ಸಿದ್ಧ: ಗೋವರ್ಧನ ರಾವ್

ಅಪೂರ್ವ ಮೇಲೆ ನಡೆದ ಹಲ್ಲೆಗೆ ಖಂಡನೆ, ಲವ್‌ ಜಿಹಾದ್‌ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 4:17 IST
Last Updated 25 ಮಾರ್ಚ್ 2022, 4:17 IST
ಅಪೂರ್ವ ಪುರಾಣಿಕ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಲವ್‌ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು 
ಅಪೂರ್ವ ಪುರಾಣಿಕ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಲವ್‌ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು    

ಹುಬ್ಬಳ್ಳಿ: ‘ಮುಸ್ಲಿಮರ ಲವ್‌ ಜಿಹಾದ್‌ಗೆ ಪ್ರತೀಕಾರವಾಗಿ ಬಜರಂಗದಳದ ಯುವಕರು ಸಹ ಅದೇ ಕೆಲಸ ಮಾಡುವುದಕ್ಕೆ ಸಿದ್ಧರಿದ್ದಾರೆ ಎನ್ನುವುದನ್ನು ಅವರು ಮರೆಯಬಾರದು’ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಕೆ.ಗೋವರ್ಧನರಾವ್‌ ಎಚ್ಚರಿಸಿದರು.

ಅಪೂರ್ವ ಪುರಾಣಿಕ ಎಂಬುವವರ ಮೇಲೆ ನಡೆದ ಹಲ್ಲೆ ಖಂಡಿಸಿ ಗುರುವಾರ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ವತಿಯಿಂದ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನಮ್ಮ ಧರ್ಮದ ಹೆಣ್ಣು ಮಕ್ಕಳು ಕ್ರೈಸ್ತ ಅಥವಾ ಮುಸ್ಲಿಮರನ್ನು ಮದುವೆಯಾಗದಂತೆ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ’ ಎಂದರು.

‘ಮುಸ್ಲಿಮರು, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ಹಿಂದೂಗಳು ಒಂದಾಗಬಾರದು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಈ ಪ್ರಯತ್ನಗಳು ಸಫಲವಾಗುವುದಿಲ್ಲ. ಹಲವು ವರ್ಷಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದು ಮುಸ್ಲಿಂ ಸಂಸ್ಕೃತಿಯ ಪರಂಪರೆ ಇನ್ನು ಮುಂದೆ ನಡೆಯುವುದಿಲ್ಲ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ನಾವು ಎಚ್ಚೆತ್ತುಕೊಂಡಿದ್ದೇವೆ. ನೀವು ಏನಾದರೂ ಮಾಡುವುದಿದ್ದರೆ, ಪಾಕಿಸ್ತಾನ, ಬಾಂಗ್ಲಾ ದೇಶಕ್ಕೆ ಹೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮುಸ್ಲಿಮರು ಅನವಶ್ಯಕ ಧಾರ್ಮಿಕ ವಿಷಯಗಳನ್ನು ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಬಾರದು’ ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಮುಖ ಸುಭಾಸ ಸಿಂಗ್ ಜಮಾದಾರ ಮಾತನಾಡಿ, ‘ಲವ್ ಜಿಹಾದ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಲಿಲ್ಲ. ರಾಜ್ಯದ ಕೆಲವು ನಿರ್ದಿಷ್ಟ ಜಾತ್ರೆಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡಿರುವುದಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾನವೀಯತೆಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಅಪೂರ್ವ ಪುರಾಣಿಕ ಅವರನ್ನು ಏಕೆ ಭೇಟಿ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಮುಸ್ಲಿಮರಿಗೆ ಸದ್ಯ ‌ಕೇವಲ ಜಾತ್ರೆಯಲ್ಲಿ ಮಾತ್ರ ನಿಷೇಧ ಹೇರಲಾಗುತ್ತಿದೆ. ಅವರು ಎಚ್ಚೆತ್ತುಕೊಳ್ಳದಿದ್ದರೆ, ಹಿಂದೂಗಳು ತಕ್ಕ ಉತ್ತರ ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜೈ ಶ್ರೀರಾಮ್‌, ಜೈ ಶಿವಾಜಿ, ಲವ್‌ ಜಿಹಾದ್‌ ಮಾಡುವವರನ್ನು ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ನಂತರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಧ್ಯಾ ದೀಕ್ಷಿತ್, ಚಂದ್ರಶೇಖರ ಗೋಕಾಕ ಮಾತನಾಡಿದರು. ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ರಮೇಶ ಕದಂ, ರಘು ಯಲ್ಲಕನವರ, ಕಲಮೇಶ ಜೋಶಿ, ಮಹೇಶ ಜೋಶಿ, ಶಿವಾನಂದ, ದತ್ತಮೂರ್ತಿ ಕುಲಕರ್ಣಿ, ರವಿನಾಯಕ, ರೂಪಾಶೆಟ್ಟಿ, ಸಿಮಾ ಲದ್ವಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.