ADVERTISEMENT

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಗೆ ಆಗ್ರಹ

ನಿರಂತರ ಹೋರಾಟದ ಎಚ್ಚರಿಕೆ: ಸಚಿವ ಜೋಶಿ ಮುತುವರ್ಜಿ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 4:52 IST
Last Updated 1 ಆಗಸ್ಟ್ 2025, 4:52 IST
ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು
ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಹುಬ್ಬಳ್ಳಿ: ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಿಂದ ನಗರದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಕ್ರಮ ವಹಿಸದ್ದನ್ನು ಖಂಡಿಸಿ ಪ್ರತಿಭಟನಕಾರರು ಘೋಷಣೆ ಕೂಗಿದರು. ಟೆಂಟ್‌ ನಿರ್ಮಿಸಿ, ಅಲ್ಲಿ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದರು.

ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, ‘ಕುಡಿಯುವ ನೀರಿಗಾಗಿ 1980ರಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೂ, ಮಹದಾಯಿ ಯೋಜನೆ ಅನುಷ್ಠಾನಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಹುಬ್ಬಳ್ಳಿ–ಧಾರವಾಡ ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುತುವರ್ಜಿ ವಹಿಸಬೇಕು. ಯೋಜನೆ ಜಾರಿಗೊಳಿಸಲಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘2018ರಲ್ಲೇ ನ್ಯಾಯಾಧಿಕರಣದಲ್ಲಿ ಪ್ರಕರಣ ಇತ್ಯರ್ಥವಾಗಿ, 2020ರಲ್ಲಿ ಗೆಜೆಟ್‌ ಅಧಿಸೂಚನೆ, 2023ರಲ್ಲಿ ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಮಂಜೂರಾತಿ ಸಹ ಸಿಕ್ಕಿದೆ. 2024ರ ಲೋಕಸಭಾ ಚುನಾವಣೆ ವೇಳೆ ಅಮಿತ್ ಶಾ ಬೆಳಗಾವಿಗೆ ಬಂದಿದ್ದಾಗ ಸಮಸ್ಯೆ ಇತ್ಯರ್ಥಪಡಿಸಿದ್ದಾಗಿ ಹೇಳಿದ್ದರು. ಆಗ ಬಿಜೆಪಿ ವಿಜಯೋತ್ಸವವನ್ನೂ ಆಚರಿಸಿತ್ತು. ಇದು ಯಾವ ಪುರುಷಾರ್ಥಕ್ಕೆ?’ ಎಂದು ಕೇಳಿದರು.

‘ಗೋವಾ ಮುಖ್ಯಮಂತ್ರಿ ವಿರೋಧಿಸಿದರೂ, ಸಚಿವ ಜೋಶಿ ಮುಂದಾಳತ್ವ ವಹಿಸಿದರೆ ಯೋಜನೆ ಜಾರಿ ಸಾಧ್ಯವಿದೆ. ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಯೋಜನೆ ಜಾರಿಯ ಅನುಮತಿ ಪತ್ರ ತಂದರೆ ಹೋರಾಟ ನಿಲ್ಲಿಸುತ್ತೇವೆ. ಇಲ್ಲವಾದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದರು. 

‘ನರಗುಂದ ಬಂಡಾಯ ಮಾದರಿ ಹೋರಾಟ’

‘ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಕ್ರಮ ವಹಿಸುವವರೆಗೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಶುಕ್ರವಾರ ರಸ್ತೆ ತಡೆ ಆನಂತರ ದೆಹಲಿಯ ಜಂತರ್‌–ಮಂತರ್‌ನಲ್ಲಿ ಪ್ರತಿಭಟನೆ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಮಾದರಿಯ ಹೋರಾಟ ನಡೆಸಲಾಗುತ್ತದೆ’ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಹೇಳಿದರು. ‘ಯೋಜನೆ ಜಾರಿಯಾದರೆ ಕುಡಿಯುವ ನೀರು ಕೈಗಾರಿಕಾ ಅಭಿವೃದ್ಧಿ ಬರಗಾಲದಲ್ಲಿ ಗುಳೆ ತಪ್ಪಿಸಬಹುದು. ಹಾಗಾಗಿ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು. ಅನುಮತಿ ಸಿಕ್ಕರೆ ವಿಜಯೋತ್ಸವ ಆಚರಿಸುತ್ತೇವೆ. ಇಲ್ಲವಾದರೆ ನರಗುಂದ ಬಂಡಾಯ ಮಾದರಿಯ ಹೋರಾಟ ಕಾನೂನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.