ಹುಬ್ಬಳ್ಳಿ:ಕಾರ್ನಿಯಾ ಅಂಧತ್ವ ಪಾಕ್ಷಿಕ ಅಭಿಯಾನ, ನೇತ್ರದಾನ ಜಾಗೃತಿ ಮೂಡಿಸುವ ಸಲುವಾಗಿ ಸಕ್ಷಮ, ಕಿಮ್ಸ್, ರೋಟರಿ ಪರಿವಾರ, ಇನ್ನರ್ವೀಲ್ ಕ್ಲಬ್, ಬಿವಿಬಿ ಎಂಜಿನಿಯರಿಂಗ್ ಕಾಲೇಜು, ಭಾರತೀಯ ವೈದ್ಯಕೀಯ ಸಂಘ ಹಾಗೂ ಯೂಥ್ ಫಾರ್ ಸೇವಾ ಸಹಯೋಗದಲ್ಲಿ ನಗರದ ಬಿವಿಬಿ ಕಾಲೇಜಿನಿಂದ ಕಿಮ್ಸ್ ಆವರಣದವರೆಗೆ ಗುರುವಾರ ಜಾಗೃತಿ ಜಾಥಾ ನಡೆಯಿತು.
ಜಾಥಾದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ವೈದ್ಯರು, ರೋಟರಿ ಹಾಗೂ ಇತರ ಸಂಘ–ಸಂಸ್ಥೆಗಳ ಸದಸ್ಯರು ನೇತ್ರದಾನದ ಮಹತ್ವ ಸಾರುವ ಜಾಗೃತಿ ಫಲಕಗಳನ್ನು ಹಿಡಿದು ಕಿಮ್ಸ್ವರೆಗೆ ಹೆಜ್ಜೆ ಹಾಕಿದರು.
ಕಿಮ್ಸ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಜಗದೀಶ ಶೆಟ್ಟರ್, ‘ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡುವುದು ಕಷ್ಟ. ಸರ್ಕಾರದ ಕಾರ್ಯಗಳಿಗೆ ಪೂರಕವಾಗಿ ಸಂಘ–ಸಂಸ್ಥೆಗಳು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿಯಲ್ಲಿ ಸಕ್ಷಮ ಸಂಸ್ಥೆಯು ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ವತಿಯಿಂದ ಆರೂಢ ಅಂಧರ ಶಾಲೆ ಮತ್ತು ಸರ್ಕಾರಿ ಅಂಧರ ಶಾಲೆ ಮಕ್ಕಳಿಗೆ ವಿವಿಧ ಸಾಧನಗಳನ್ನು ವಿತರಿಸಲಾಯಿತು. ಸಕ್ಷಮ ಉತ್ತರ ಪ್ರಾಂತ ಅಧ್ಯಕ್ಷ ಎಸ್.ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಮಜೇಥಿಯಾ ಫೌಂಡೇಷನ್ ಮುಖ್ಯಸ್ಥ ಜಿತೇಂದ್ರ ಮಜೇಥಿಯಾ, ಕಿಮ್ಸ್ನ ಡಾ. ಈಶ್ವರ ಹೊಸಮನಿ, ಡಾ. ಸವಿತಾ ಕನಕಪುರ, ಡಾ. ಅರುಣಕುಮಾರ ಸಿ., ಡಾ.ಎಸ್.ವೈ. ಮುಲ್ಕಿ ಪಾಟೀಲ, ನಾಗರಾಜ ನಡಕಟ್ಟಿ, ಡಾ. ಸುನೀಲ ಗೋಖಲೆ, ನಾಗಲಿಂಗ ಮುರಗಿ, ಸರ್ವೇಶ ಸ್ವಾಮಿ, ಡಾ. ವಿಜಯವಿಠ್ಠಲ ಮನಗೂಳಿ, ಡಾ. ಸುಭಾಷ ಬಬ್ರುವಾಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.