ಹುಬ್ಬಳ್ಳಿ: ನಗರದ ವಿವಿಧೆಡೆ ಮಂಗಳವಾರ ಮೊಹರಂ ಅನ್ನು ಆಚರಿಸಲಾಯಿತು. ಸಾಮರಸ್ಯದ ಸಂಕೇತ ಎಂದೇ ಕರೆಯಲಾಗುವ ಹಬ್ಬದಲ್ಲಿ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದವರು ಪಾಲ್ಗೊಂಡರು.
ಹಳೇ ಹುಬ್ಬಳ್ಳಿಯ ಅರವಿಂದ ನಗರ, ಗಂಜಿಪೇಟೆ, ಈಶ್ವರ ನಗರ, ಬಮ್ಮಾಪುರ ಓಣಿ, ಗೌಳಿ ಗಲ್ಲಿ, ಬೆಂಗೇರಿ, ಕೇಶ್ವಾಪುರ ಸೇರಿದಂತೆ ವಿವಿಧೆಡೆ ಮೊಹರಂ ಸಡಗರ ಮನೆ ಮಾಡಿತ್ತು.
ಒಣ ಕೊಬ್ಬರಿ, ಖಾರೀಕು ಅರ್ಪಿಸಿದ ಭಕ್ತರು, ಹಬ್ಬದ ಅಂಗವಾಗಿ ಬೆಂಕಿ ಕಿಚ್ಚು (ಕೊಂಡ) ಹಾಯ್ದು ಭಕ್ತಿ ಮೆರೆದರು. ತರಹೇವಾರಿ ಬಣ್ಣದ ಬಟ್ಟೆ, ಆಲಂಕಾರಿಕ ಪೇಪರ್, ವರ್ಣರಂಜಿತ ರಿಬ್ಬನ್ ಹಾಗೂ ಬಿದಿರಿನ ಕಡ್ಡಿಗಳಿಂದ ಸುಂದರವಾಗಿ ಅಲಂಕರಿಸಿದ ಪಂಜಾಗಳ ಮೆರವಣಿಗೆಯು ಓಣಿಯಲ್ಲಿ ನಡೆಯಿತು. ಭಕ್ತರು ಪಂಜಾಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಗಮನ ಸೆಳೆದ ಮೇಳ:ಬೆಂಗೇರಿಯಹಟೇಲ ಭಾಷಾ ದರ್ಗಾ ಜುಮ್ಮಾ ಮಸೀದಿಯಲ್ಲಿ ಆರು ಪಂಜಾಗಳನ್ನು ಐದು ದಿವಸ ಕೂರಿಸಲಾಗಿತ್ತು. ಬೆಳಿಗ್ಗೆ ವಿಶೇಷ ಪೂಜೆ ಬಳಿಕ, ಸ್ಥಳೀಯ ಬೀದಿಗಳಲ್ಲಿ ಪಂಜಾಗಳ ಮೆರವಣಿಗೆ ನಡೆಯಿತು. ಹೆಜ್ಜೆ ಮೇಳವು ಮೆರವಣಿಗೆಗೆ ಕಳೆ ತಂದಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಬೆಂಗೇರಿಯಿಂದ ನಾಗಶೆಟ್ಟಿಕೊಪ್ಪದ ಆಂಜನೇಯ ದೇವಸ್ಥಾನಕ್ಕೆ ಪಂಜಾಗಳು ಭೇಟಿ ನೀಡಿದವು. ಸಂಜೆ ಖಾದಿ ಗ್ರಾಮೋದ್ಯೋಗದಲ್ಲಿರುವ ಕೆಂಪು ಬಾವಿಯಲ್ಲಿ ಪಂಜಾಗಳ ಮುಖ ತೊಳೆಯುವುದರೊಂದಿಗೆ ಮೊಹರಂ ಆಚರಣೆಯನ್ನು ಮುಕ್ತಾಯಗೊಳಿಸಿತು.
ಮಹಾನಗರ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಹನಮಂತಪ್ಪ ಹೋಳಿ, ದ್ಯಾಮರಾವ ಕಾಳೆ, ಹೂವಪ್ಪ ದಾಯಗೊಡಿ, ರಮೇಶ ಮಹಾದೇವಪ್ಪನವರ, ಮಹಾದೇವಪ್ಪ ನರಗುಂದ, ರಾಜು ಕಾಳೆ, ಆನಂದ ಬೆಂಗೇರಿ, ಡಿ.ಜಿ. ಚಂದನ್ನವರ, ಚಮನಸಾಬ ಮುಲ್ಲಾ, ಕಲಂದರ ಮುಲ್ಲಾ, ರಜಾಕ ನದಾಫ, ಅಶೋಕ ವಾಲ್ಮೀಕಿ, ರವಿ ಮಳಗಿ, ಅಡಿವೆಪ್ಪ ಹೊಸಮನಿ, ರಾಜಪ್ಪ ಕಾಳಿ, ಕಲ್ಲಪ್ಪ ಖಂಡೇಕಾರ, ಗುರುಸಿದ್ದಪ್ಪ ಕುಂದಗೊಳ, ಮೈಲಾರೆಪ್ಪ ಹೋಂಡದಕಟ್ಟಿ, ಕಲ್ಲಪ್ಪ ಭರಮಗೌಡ್ರ, ಶಿವಾನಂದ ಹೆಬ್ಬಳ್ಳಿ, ಚಂದ್ರು ಅಮಾತ್ಯ, ಖಾಶೀಮ ಕೂಡಲಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.