ಧಾರವಾಡ: ಕಲಘಟಗಿ ರಸ್ತೆಯ ಮಾಡರ್ನ್ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಆವರಣದಲ್ಲಿ ತಂದು ಸುರಿಯಲಾಗಿದ್ದ ಮಣ್ಣು, ಕಬ್ಬಿಣ, ಪೈಪ್ಗಳ ತೆರವು ಕಾರ್ಯಾಚರಣೆ ಬುಧವಾರದಿಂದ ಆರಂಭವಾಗಿದೆ.
ವಿವಾದದಲ್ಲಿರುವ ಸರ್ಕಾರಿ ಶಾಲೆ ಆವರಣಕ್ಕೆ ಕಾಂಪೌಂಡ್ ಇಲ್ಲದ ಕಾರಣ, ಕಟ್ಟಡ ಸಾಮಗ್ರಿ ಹಾಗೂ ಜಲಮಂಡಳಿಗೆ ಸೇರಿ ಪೈಪ್ಗಳನ್ನು ತಂದು ಇಲ್ಲಿ ಹಾಕಲಾಗಿತ್ತು. ಈ ಕುರಿತು ಜುಲೈ 8ರಂದು ‘ಪ್ರಜಾವಾಣಿ’ ಪತ್ರಿಕೆಯು ‘ಸರ್ಕಾರಿ ಶಾಲೆ ಆವರಣದಲ್ಲಿ ಮಣ್ಣು, ಕಬ್ಬಿಣ, ಪೈಪು’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿಗೆ ಎಚ್ಚೆತ್ತುಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಅನುಮತಿ ಇಲ್ಲದೆ ಹಾಕಲಾಗಿದ್ದ ಮಣ್ಣು, ಕಬ್ಬಿಣ ಹಾಗೂ ಪೈಪ್ಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿತು.
ಈ ಕುರಿತು ಪ್ರತಿಕ್ರಿಯಿಸಿದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ‘ಶಾಲೆಗೆ ಸೇರಿದ ಜಾಗ ಸದ್ಯ ವಿವಾದದಲ್ಲಿದೆ. ಈ ಜಾಗದಲ್ಲಿ ಹಾಕಲಾಗಿದ್ದ ವಸ್ತುಗಳನ್ನು ತೆರವುಗೊಳಿಸುವಂತೆ ಮಣ್ಣು ಹಾಕಿದ ನಿವೇಶನದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಹಾಗೆಯೇ ಪೈಪ್ಗಳನ್ನು ಸ್ಥಳಾಂತರಿಸುವಂತೆ ಜಲಮಂಡಳಿಗೂ ಪತ್ರ ಬರೆಯಲಾಗಿತ್ತು. ಅದರಂತೆ ತೆರವು ಕಾರ್ಯಾಚರಣೆ ನಡೆಯುತ್ತಿದೆ’ ಎಂದರು.
‘ವಿವಾದದಲ್ಲಿರುವ ಈ ಜಾಗದ ಕುರಿತು ಶೀಘ್ರದಲ್ಲಿ ವಕೀಲರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.