ADVERTISEMENT

ಹುಬ್ಬಳ್ಳಿಯಲ್ಲಿ ದರ್ಗಾ ತೆರವು: ಇದು ಬಿಜೆಪಿ ಷಡ್ಯಂತ್ರ ಎಂದ ಅಲ್ತಾಫ್ ಹಳ್ಳೂರು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 4:36 IST
Last Updated 21 ಡಿಸೆಂಬರ್ 2022, 4:36 IST
ಹುಬ್ಬಳ್ಳಿಯಲ್ಲಿ ದರ್ಗಾ ತೆರವು ಕಾರ್ಯಾಚರಣೆ
ಹುಬ್ಬಳ್ಳಿಯಲ್ಲಿ ದರ್ಗಾ ತೆರವು ಕಾರ್ಯಾಚರಣೆ   

ಹುಬ್ಬಳ್ಳಿ: ‘ಬಿ.ಆರ್.ಟಿ.ಎಸ್‌. ಸಂಸ್ಥೆ ಹೆಸರಲ್ಲಿ ಬಿಜೆಪಿ ಷಡ್ಯಂತ್ರ ನಡೆಸಿ ನಗರದ ಬೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮಹ್ಮದ್ ಶಾ ಖಾದ್ರಿ ದರ್ಗಾವನ್ನು ತೆರವು ಮಾಡುತ್ತಿದೆ’ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಲ್ತಾಫ್ ಹಳ್ಳೂರು ಆರೋಪಿಸಿದ್ದಾರೆ.

ತೆರವು ಕಾರ್ಯಾಚರಣೆ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಜೀವಂತ ಸಮಾಧಿಯಾದ ಧರ್ಮದ ಮುಖಂಡರ ದರ್ಗಾ ತೆರವು ಮಾಡುತ್ತಿರುವುದು ಖಂಡನೀಯ. ಇದರ ಹಿಂದಿರುವ ವ್ಯಕ್ತಿಗಳಿಗೆ ಶಾಪ ತಟ್ಟದೇ ಇರದು' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಬಿ.ಆರ್.ಟಿ.ಎಸ್. ಮಾರ್ಗ ಕೆಲವೆಡೆ 18 ಮೀ, 20 ಮೀ, 37 ಮೀ ವಿಸ್ತೀರ್ಣವಿದೆ. ತೆರವು ಮಾಡುತ್ತಿರುವ ಬೈರಿದೇವರಕೊಪ್ಪದ ದರ್ಗಾ ಬಳಿ 45 ಮೀ.‌ ವಿಸ್ತೀರ್ಣದ ಮಾರ್ಗವಿದ್ದರೂ, ತೆರವು ಯಾಕೆ? ಶಾಸಕ ಅರವಿಂದ ಬೆಲ್ಲದ ಅವರಿಗೆ ಸಂಬಂಧಿಸಿದ ಜಾಗ ಉಳಿಸಲು ಪೂರ್ವನಿಯೋಜಿತವಾಗಿ ನಡೆಸಿದ ಕಾರ್ಯವಿದು. ಅಲ್ಲದೆ, ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಹುಟ್ಟಿಸುತ್ತ ಬಂದಿದೆ' ಎಂದು ಆರೋಪಿಸಿದರು.

ADVERTISEMENT

'ನೂತನ ತಂತ್ರಜ್ಞಾನ ಬಳಸಿ ದರ್ಗಾ ತೆರವುಗೊಳಿಸಲು ನಾವು ಕಾಲಾವಕಾಶ ಕೇಳಿದ್ದೇವೆ. ಸಮಾಜದ ಮುಖಂಡರು ಸಹ ಅದಕ್ಕೆ ಸಹಕಾರ ನೀಡಲು ಸಿದ್ಧರಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಾವು ಸ್ಥಳಾಂತರಿಸುತ್ತೇವೆ ಎಂದರೂ, ಅದಕ್ಕೆ ಸ್ಥಳೀಯಾಡಳಿತ ಸ್ಪಂದಿಸುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.