ADVERTISEMENT

ಟಿಪ್ಪು ಜಯಂತಿ ವಿರುದ್ದ ಹೈಕೋರ್ಟ್ ಗೆ ಪಿಐಎಲ್: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 6:02 IST
Last Updated 10 ನವೆಂಬರ್ 2022, 6:02 IST
   

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಅನುಮತಿ ನೀಡಬಾರದು ಎಂದು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮುತಾಲಿಕ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು‌ ಜಯಂತಿ ಆಚರಣೆಯನ್ನು ಬಿಜೆಪಿ ತಡೆಯಬಹುದಿತ್ತು. ಆದರೆ, ರಾಜಕೀಯ ಲಾಭಕ್ಕಾಗಿ ಅವರೇ ಈ ತಂತ್ರಗಾರಿಕೆ ಮಾಡಿದ್ದಾರೆ. ಎಐಎಂಐಎಂ ದೇಶದ್ರೋಹಿ ಪಕ್ಷವಾಗಿದ್ದು, ಭಯೋತ್ಪಾದನೆ ಬೆಳೆಸುತ್ತದೆ. ಅವರಿಗೆ ಅನುಮತಿ ಅವಕಾಶ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿಯನ್ನು ಇಲ್ಲಷ್ಟೇ ಅಲ್ಲ, ರಾಜ್ಯದ ಎಲ್ಲಿಯೂ ಆಚರಣೆ ಮಾಡಬಾರದು. ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ, ದೇವಸ್ಥಾನಗಳನ್ನು ನಾಶಪಡಿಸಿದವನು. ಕನ್ನಡ ದ್ರೋಹಿಯಾದ ಟಿಪ್ಪು ಜಯಂತಿಯನ್ನು ನಮ್ಮ ನೆಲದಲ್ಲಿ ಯಾವುದೇ ಕಾರಣಕ್ಕೂ ಆಚರಿಸಬಾರದು. ಇದನ್ನು ಶ್ರೀರಾಮ‌ ಸೇನೆ ತಡೆಯುತ್ತದೆ ಎಂದರು.

ADVERTISEMENT

ಮಹಾನಗರ ಪಾಲಿಕೆ ಎಲ್ಲಾ ಮಹಾಪುರುಷರ ಜಯಂತಿ ಆಚರಣೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ಟಿಪ್ಪು ಜಯಂತಿಗೆ ಅನುಮತಿ ನೀಡಿರುವುದು ಸರಿಯಲ್ಲ.‌ ಬೇರೆ ಮಹಾಪುರುಷರ ಜೊತೆ ಟಿಪ್ಪು ಹೋಲಿಕೆ ಮಾಡುವುದು ಸೂಕ್ತವಲ್ಲ. ಪಾಲಿಕೆ ನಿರ್ಧಾರ ಖಂಡನೀಯ. ರಾಜ್ಯ ಸರ್ಕಾರವೇ ಜಯಂತಿ ಆಚರಿಸುತ್ತಿಲ್ಲ. ಹೀಗಿರುವಾಗ, ಇಲ್ಲಿ ಹೇಗೆ ಅವಕಾಶ ನೀಡಿದರು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.