ಹುಬ್ಬಳ್ಳಿ: ‘ದೇಶದ ರಕ್ಷಣೆ ಹಾಗೂ ಭವ್ಯ ಭವಿಷ್ಯಕ್ಕೆ ಎನ್ಸಿಸಿ ಕೊಡುಗೆ ಅಪಾರವಾಗಿದೆ’ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಅಶೋಕ ಶೆಟ್ಟರ್ ಹೇಳಿದರು.
ಬಿವಿಬಿ ಕಾಲೇಜಿನಲ್ಲಿ ಶುಕ್ರವಾರ ನಡೆದ 28ನೇ ಕರ್ನಾಟಕ ಬಟಾಲಿಯನ್ನ ಎನ್ಸಿಸಿ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಹತ್ತು ದಿನ ನಡೆಯುವ ಈ ಎನ್ಸಿಸಿ ಶಿಬಿರ ಎಲ್ಲ ಕೆಡೆಟ್ಗಳ ಜೀವನವನ್ನೂ ಉಜ್ವಲಗೊಳಿಸಲಿದೆ. ಶಿಸ್ತಿನ ಪಾಠದ ಜೊತೆಗೆ ಸಾಮಾನ್ಯ ಜ್ಞಾನ, ರಕ್ಷಣೆ ಕುರಿತು ಮಾಹಿತಿಯೂ ಸಿಗಲಿದೆ ಎಂದರು.
ಎನ್ಸಿಸಿ ತರಬೇತಿ ಪಡೆದವರಿಗೆ ದೇಶ ಸೇವೆಯಲ್ಲಿ ಮೊದಲ ಆದ್ಯತೆ. ನೇವಿ, ಮಿಲಿಟರಿಗಳಲ್ಲಿ ಅವರಿಗೆ ಸ್ಥಾನ ಮೀಸಲಿಡಲಾಗಿರುತ್ತದೆ. ವೈದ್ಯಕೀಯ, ಎಂಜಿನಿಯರ್ ಕೋರ್ಸ್ಗಳ, ಉದ್ಯೋಗ ಆಯ್ಕೆಯಲ್ಲಿ ಎನ್ಸಿಸಿ ಮಾಡಿದವರಿಗೆ ಕೆಲ ಸೀಟುಗಳನ್ನು ಮೀಸಲಾಗಿಡಲಾಗುತ್ತದೆ ಎಂದು ತಿಳಿಸಿದರು.
ಎನ್ಸಿಸಿ ತರಬೇತಿ ಪಡೆದವರ ಬದುಕು ಶಿಸ್ತಿನಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಿರುತ್ತದೆ. ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಸಂಪೂರ್ಣ ಯಶಸ್ಸು ಕಾಣುತ್ತಾರೆ ಎಂದು ಅಭಿಪ್ರಾಯಪಟ್ಟರು. ಕಮಾಂಡಿಂಗ್ ಆಫೀಸರ್ ಲೆಫ್ಟಿನಲ್ ಕರ್ನಲ್ ಅಳಗವಾಡಿ ವಿವೇಕಾನಂದ ಇದ್ದರು.
ಶಿಬಿರದಲ್ಲಿ ಏನೇನು? ನಗರದ ಬಿವಿಬಿ ಮೈದಾನದಲ್ಲಿ ಶುಕ್ರವಾರದಿಂದ ಹತ್ತು ದಿನಗಳವರೆಗೆ ಶಿಬಿರ ನಡೆಯಲಿದೆ. 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಪ್ರತಿದಿನ ಯೋಗ, ಮ್ಯಾಪ್ ರೀಡಿಂಗ್, ಡ್ರಿಲ್, ಶಸ್ತ್ರಾಸ್ತ್ರ ತರಬೇತಿ, ಸಾಮಾನ್ಯ ಜ್ಞಾನ, ಆಟ, ಮನರಂಜನೆ ಇರಲಿವೆ. ಒಂದು ದಿನ ಧಾರವಾಡದಲ್ಲಿ ಫೈರಿಂಗ್ ತರಬೇತಿಯನ್ನು ಸಹ ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.