ಹುಬ್ಬಳ್ಳಿ: ಬ್ಯಾಂಕ್ ಗ್ರಾಹಕರ ಸೇವೆ ಹೆಸರಿನಲ್ಲಿ ವ್ಯಕ್ತಿಯೊಬ್ಬ, ಗ್ರಾಹಕರೊಬ್ಬರ ಖಾತೆಯಿಂದ ₹3 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಧಾರವಾಡದ ಗಾಂಧಿನಗರದ ಎಂಜಿನಿಯರ್ ಶಿರಿನಾ ಬೇಗಂ ವಂಚನೆಗೊಳಗಾದವರು.
ಬ್ಯಾಂಕ್ ಖಾತೆಯ ಇ– ಸ್ಟೇಟ್ಮೆಂಟ್ ಪಡೆಯಲು ಶಿರಿನಾ ಅವರು ಗೂಗಲ್ನಲ್ಲಿ ಹುಡುಕಾಡಿದ್ದರು. ಆಗ ಸಿಕ್ಕ ನಕಲಿ ಸಂಖ್ಯೆಯೊಂದಕ್ಕೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವಂಚಕ ಬ್ಯಾಂಕ್ ಗ್ರಾಹಕರ ಸೇವೆ ಒದಗಿಸುವ ಅಧಿಕಾರಿ ನೆಪದಲ್ಲಿ, ಸ್ಟೇಟ್ಮೆಂಟ್ ಪಡೆಯಲು ಶಿರಿನಾ ಅವರಿಗೆ ಲಿಂಕ್ ಕಳಿಸಿದ್ದಾರೆ.
ಅದನ್ನು ಕ್ಲಿಕ್ ಮಾಡಿದ ಶಿರಿನಾ ಅವರು, ಬ್ಯಾಂಕ್ ಖಾತೆ ಸಂಖ್ಯೆ ಸೇರಿದಂತೆ ಇತರ ಮಾಹಿತಿ ತುಂಬಿದ್ದಾರೆ. ನಂತರ ಬಂದ ಒಟಿಪಿಗಳನ್ನು ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಶಿರಿನಾ ಅವರ ಬ್ಯಾಂಕ್ ಖಾತೆಯಿಂದ ₹3 ಲಕ್ಷ ಕಡಿತವಾಗಿದೆ. ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವ ಪತ್ತೆ: ನಗರದ ಉಣಕಲ್ ಕೆರೆಯಲ್ಲಿ ಗುರುವಾರ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಕೆರೆ ಪಕ್ಕದಲ್ಲಿರುವ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಪಕ್ಕ ಮಧ್ಯಾಹ್ನ 3.45ರ ಸುಮಾರಿಗೆ ತೇಲುತ್ತಿದ್ದ ಶವವನ್ನು ಗಮನಿಸಿದ ಸ್ಥಳೀಯರು ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಶವವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
60 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.