ಹುಬ್ಬಳ್ಳಿ: ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಕುರಿತು ದೇಶದ ಕೆಲವೆಡೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಹುಧಾ ಪೊಲೀಸ್ ಕಮಿಷನರೇಟ್ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಶಾಂತಿ ಸಭೆ ಕರೆಯಲಾಗಿತ್ತು.
ಹಳೇಹುಬ್ಬಳ್ಳಿ, ಕಸಬಾಪೇಟ, ಬೆಂಡಿಗೇರಿ, ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನೂಪುರ್ ಶರ್ಮಾ ಹೇಳಿಕೆಗೆ ಸಂಬಂಧಿಸಿ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಎಲ್ಲಿಯೋ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ನಮ್ಮ ನಡುವಿನ ಸೌಹಾರ್ದ ಹಾಳು ಮಾಡಿಕೊಳ್ಳುವುದು ಬೇಡ ಎಂದು ಇನ್ಸ್ಪೆಕ್ಟರ್ ಶ್ಯಾಮರಾಜ್ ಸಜ್ಜನ್ ತಿಳಿಸಿದರು.
ಯಾವುದೇ ಕಾರಣಕ್ಕೂ ಶಾಂತಿ ಕದಡುವ ಕೃತ್ಯದಲ್ಲಿ ಯಾರೂ ಪಾಲ್ಗೊಳ್ಳಬಾರದು. ಪ್ರೀತಿ, ಸೌಹಾರ್ದತೆಯಿಂದ ಬದುಕಬೇಕು. ಅಭಿವೃದ್ಧಿಯತ್ತ ಸಾಗುತ್ತಿರುವ ಹುಬ್ಬಳ್ಳಿಯಲ್ಲಿ ಅಶಾಂತಿ ವಾತಾವರಣ ಉಂಟಾದರೆ ವೈಯಕ್ತಿಕ ಬದುಕಿಗೂ ಹಿನ್ನಡೆಯಾಗುತ್ತದೆ. ಕೋಮು ಸೌಹಾರ್ದತೆ ಕದಡುವವರು ಯಾರೇ ಆಗಿರಲಿ, ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ದುರ್ಗದ ಬೈಲ್ ಬಳಿಯ ಷಾ ಬಝಾರ್ ಬಳಿ ಶಹರ ಠಾಣೆ ವತಿಯಿಂದ ಶಾಂತಿ ಸಭೆ ನಡೆಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.