
ಧಾರವಾಡ: ರಾಜಕಾರಣ ಎಂದರೆ ಈಗ ಅಧಿಕಾರ ದಾಹ, ಹಣಬಲದ ವ್ಯಕ್ತಿಗಳ ಸಂಘ ಎಂದಾಗಿದೆ. ಸಮಗ್ರ ಅಧ್ಯಯನ, ಮೇಧಾವಿತನ, ತತ್ವ ಪಾಲನೆ ಗುಣವುಳ್ಳ ಜನರು ರಾಜಕೀಯ ಕ್ಷೇತ್ರವನ್ನು ಹೆಚ್ಚು ಪ್ರವೇಶಿಸಬೇಕು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಎಸ್. ಶಿವಳ್ಳಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಾಗರಿಕ ಕರ್ತವ್ಯ, ರಾಜಕೀಯ ಅಧಿಕಾರ ಹಾಗೂ ನೈತಿಕ ಮೌಲ್ಯಗಳು’ ಕುರಿತು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳ ಸಂಖ್ಯೆ ಜಾಸ್ತಿ ಇದೆ. ರಾಜಕಾರಣಿಗಳು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಪದ ಬಳಕೆಯಲ್ಲಿ ಎಚ್ಚರ ವಹಿಸಬೇಕು. ಮನಸ್ಸಿಗೆ ತೋಚಿದಂತೆ ಮಾತನಾಡಿದರೆ ಕೆಟ್ಟ ಪರಿಣಾಮ ಬೀರುತ್ತದೆ. ರಾಜಕೀಯ ಪ್ರವೇಶಿಸುವವರು ಕಾನೂನು, ನೀತಿ, ನಿಯಮ, ತತ್ವ ಪಾಲಿಸಬೇಕು ಎಂದರು.
ವಕೀಲರಾದ ಮಹಾನಂದಾ ಮುದೇನಗುಡಿ ಮಾತನಾಡಿ, ಹಕ್ಕುಗಳಿಗಾಗಿ ಹೋರಾಡುವವರು, ಕರ್ತವ್ಯಗಳನ್ನೂ ಚಾಚು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಚಂದ್ರಕಾಂತ ಬೆಲ್ಲದ ಅವರು ಮಾತನಾಡಿ, ನಾಗರಿಕರು ಮತ್ತು ರಾಜಕಾರಣಿಗಳು ಮೌಲ್ಯಗಳನ್ನು ಕಾಪಾಡಿಕೊಳ್ಲಬೇಕು. ಮನಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.
ಧಾರವಾಡ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಸುರೇಶ ಹುಡೇದಗಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಕಾನೂನು ಮಂಟಪದ ಸಂಚಾಲಕ ಗುರು ಹಿರೇಮಠ, ಎನ್.ಆರ್.ಬಾಳಿಕಾಯಿ, ಶಂಕರ ಹಲಗತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.