ಹುಬ್ಬಳ್ಳಿ: ‘ಕವಿ ಜನ ಸಾಮಾನ್ಯರ ಸಮಸ್ಯೆಗಳ ಕುರಿತು ಕವಿತೆಗಳನ್ನು ರಚಿಸಿ, ಜಾಗೃತಿ ಮೂಡಿಸಬೇಕು. ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಬರೆದಾಗ ಮಾತ್ರ ಆತ ಜನರಿಗೆ ಹತ್ತಿರವಾಗುತ್ತಾನೆ’ ಎಂದು ಸಾಹಿತಿ ಗೋವಿಂದ ಮಣ್ಣೂರ ಅಭಿಪ್ರಾಯಪಟ್ಟರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
‘ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುವುದಕ್ಕೆ ಮುಂಚೆಯೇ, ಬೆಲೆ ಏರಿಕೆ ಜನರನ್ನು ಮತ್ತಷ್ಟು ಹೈರಾಣಗೊಳಿಸಿದೆ. ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ವಾಸ್ತವ ಸಂಗತಿಗಳ ಕುರಿತು ಕವಿಗಳು ಪ್ರಭುತ್ವದ ಗಮನ ಸೆಳೆಯಬೇಕು. ಇದರಿಂದ ಒಂದಿಷ್ಟು ಬದಲಾವಣೆಗಳಾದರೂ ಆಗಬಹುದು’ ಎಂದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಮಹಾಂತಪ್ಪ ನಂದೂರ, ‘ಕವಿ ಮನಸ್ಸಿಗೆರಸಾನುಭವ ಮುಖ್ಯ. ಆಗ ರಸಾನುಭೂತಿ ಜತೆಗೆ, ವಿಷಯಸ್ವಾದನೆ ಮತ್ತು ಸಂವೇದನಾಶೀಲತೆ ನಮ್ಮೊಳಗೆ ಜಾಗೃತಗೊಳ್ಳುತ್ತದೆ. ಕವಿ ಭಾವಜೀವಿಯಾದಷ್ಟು ಆತನಿಂದ ಉತ್ತಮ ಸಾಹಿತ್ಯ ಹೊರಬರುತ್ತದೆ’ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಪ್ಪತ್ತಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ಸಾಹಿತಿ ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ನ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಕೆ.ಎ. ದೊಡ್ಡಮನಿ, ಅಕ್ಕನ ಬಳಗದ ಅಧ್ಯಕ್ಷೆ ಶಾಂತಾ ಹೊಸಕೋಟಿ, ಪ್ರೊ.ಕೆ.ಎಸ್. ಕೌಜಲಗಿ, ಬಿ.ಎಸ್. ಮಾಳವಾಡ, ಪ್ರೊ.ಎಸ್.ಎಸ್. ದೊಡಮನಿ, ಡಾ. ಜಿನದತ್ತ ಹಡಗಲಿ, ಉದಯಚಂದ್ರ ದಿಂಡಿವಾರ, ಮೃತ್ಯುಂಜಯ ಮಟ್ಟಿ, ದತ್ತಿ ದಾನಿಗಳಾದ ಜಯಮ್ಮ ಆರ್. ಬಾಗಿ, ಪ್ರೊ. ವಿಜಯಲಕ್ಷ್ಮಿ ಕಟ್ಟಿಮಠ, ಎಸ್.ಜಿ. ಯಕ್ಕುಂಡಿ ಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.