ADVERTISEMENT

ಮೌಲ್ಯಗಳೇ ಬೇಕಿಲ್ಲದ ರಾಜಕೀಯ: ಪಾಂಡುರಂಗ ಪಾಟೀಲ ಬೇಸರ

ಮೋಹನ ಏಕಬೋಟೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:09 IST
Last Updated 18 ಅಕ್ಟೋಬರ್ 2020, 16:09 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಮೋಹನ ಏಕಬೋಟೆ ಮೂರನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಿಯಾಂಕಾ ಬಸವಾ ಅವರಿಗೆ ಗೌರವಿಸಲಾಯಿತು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಮೋಹನ ಏಕಬೋಟೆ ಮೂರನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಿಯಾಂಕಾ ಬಸವಾ ಅವರಿಗೆ ಗೌರವಿಸಲಾಯಿತು   

ಹುಬ್ಬಳ್ಳಿ: ಹಿಂದೆ ರಾಜಕೀಯವೆಂದರೆ ತತ್ವ, ಸಿದ್ಧಾಂತಗಳು, ದೂರದೃಷ್ಟಿ ಮತ್ತು ಜ್ಞಾನದ ಭಂಡಾರವೇ ತುಂಬಿರುತ್ತಿದ್ದವು. ಆದರೆ, ಈಗ ಮೌಲ್ಯಗಳೇ ಇಲ್ಲದ ರಾಜಕೀಯ ತುಂಬಿಕೊಂಡಿದೆ ಎಂದು ಮಾಜಿ ಮೇಯರ್‌ ಪಾಂಡುರಂಗ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಮೋಹನ ಏಕಬೋಟೆ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಮೂರನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ‘ಹುಬ್ಬಳ್ಳಿ–ಧಾರವಾಡ ರಾಜಕೀಯದಲ್ಲಿ ನೈತಿಕ ಮೌಲ್ಯಗಳು’ ವಿಷಯದ ಕುರಿತು ಉಪನ್ಯಾಸ ನೀಡಿ ‘ಈಗ ರಾಜಕೀಯದಲ್ಲಿ ಮೌಲ್ಯಗಳನ್ನು ಹುಡುಕಬೇಕಾಗಿದೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು, ವ್ಯಕ್ತಿಗತವಾಗಿ ಮೌಲ್ಯಗಳನ್ನು ರೂಢಿಸಿಕೊಂಡರೆ ಆ ರಾಜಕಾರಣಿಗೆ ಸಿಗುವ ಗೌರವವೇ ಬೇರೆ. ರಾಜಕೀಯ ಎಂದರೆ ಏನು ಹಾಗೂ ಹೇಗೆ ಎನ್ನುವ ವಿಶ್ಲೇಷಣೆ ಮಾಡುವುದೇ ಕಷ್ಟವಾಗಿದೆ’ ಎಂದರು.

‘ಈಗ ರಾಜಕೀಯ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಮೌಲ್ಯ, ಸಿದ್ದಾಂತಗಳು, ಯೋಜನೆಗಳು, ಜನರ ಕಷ್ಟನಷ್ಟಗಳ ಬಗ್ಗೆ ಅರಿವು ಇರಬೇಕಾಗಿಲ್ಲ. ತಮ್ಮ ಸುತ್ತಮುತ್ತಲೂ ಒಂದಷ್ಟು ಜನರಿದ್ದರೆ ಅವರಿಗೆ ಅದೇ ರಾಜಕೀಯ. ಮೊದಲಾದರೆ ರಾಜಕಾರಣಿಗಳ ಮಾತಿನಲ್ಲಿ ಸೈದ್ಧಾಂತಿಕತೆ ಇರುತ್ತಿತ್ತು. ಮೋಹನ ಎಕಬೋಟೆ ಅವರು ರಾಜಕಾರಣದಲ್ಲಿ ಮೌಲ್ಯಗಳನ್ನು ಉಳಿಸಿಕೊಂಡಿದ್ದರಿಂದಲೇ ಈಗಲೂ ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದೇವೆ. ಈಗ ಮಾಜಿ ಸಂಸದ ಐ.ಜಿ. ಸನದಿ ಅವರು ಮೌಲ್ಯಯುತ ರಾಜಕಾರಣಕ್ಕೆ ಸಾಕ್ಷಿಪ್ರಜ್ಞೆಯಂತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಸನದಿ ಅವರು ‘ರಾಜಕೀಯದಲ್ಲಿ ಕನ್ನಡ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜೀವೇಶ್ವರ ಶಾಲೆಗೆ ಹೆಚ್ಚು ಅಂಕಗಳನ್ನು ಪಡೆದ ಪ್ರಿಯಾಂಕಾ ಬಸವಾ ಅವರನ್ನು ಸನ್ಮಾನಿಸಲಾಯಿತು.

ಸಂಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಹುಬ್ಬಳ್ಳಿ–ಧಾರವಾಡ ಕಣ್ಮಣಿಗಳು’ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯ ವಿದ್ಯಾರ್ಥಿಗಳ ವಿಭಾಗದಲ್ಲಿ ದೀಪಿಕಾ ಶಣೈ ಪ್ರಥಮ ಮತ್ತು ತರುಣ ಸುರೇಶ ಬಾಗೇವಾಡಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಸಾರ್ವಜನಿಕ ವಿಭಾಗದಲ್ಲಿ ಸಂತೋಷಕುಮಾರ ಕನೋಜನವರ, ರೇಷ್ಮಾ ಯಳ್ಳೂರ (ಪ್ರಥಮ), ನಿವೇದಿತಾ ಅ. ಹಿರೇಮಠ, ಸಾಧನಾ ಬಿ. ಮಠದ (ದ್ವಿತೀಯ) ಮತ್ತು ಸುನಿತಾ ವಿ. ಹುಬಳೀಕರ, ಬಿ.ಎಸ್‌. ಮಾಳವಾಡ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.ಪ್ರತಿಷ್ಠಾನದ ಟ್ರಸ್ಟಿ ಶಶಾಂಕ ಮತ್ತು ವಿಜಯಶ್ರೀ ಜಿ. ಹಿರೇಮಠ ನಿರ್ಣಾಯಕರಾಗಿದ್ದರು.

ಮಾಜಿ ಮೇಯರ್‌ ರಾಧಾಬಾಯಿ ಎನ್‌. ಸಪಾರೆ, ಪತ್ರಕರ್ತ ಸುಶೀಲೇಂದ್ರ ಕುಂದರಗಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅದ್ಯಕ್ಷ ಡಾ. ಲಿಂಗರಾಜ ಅಂಗಡಿ, ಬಿ.ಎಸ್‌. ಮಾಳವಾಡ, ಜಯಶ್ರೀ ಉಳ್ಳಾಗಡ್ಡಿ, ಎಸ್‌ಜೆಎಂವಿಎಸ್‌ ಕಾಲೇಜನ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಲಕ್ಷ್ಮಿ ಡಿ.ಸಿ. ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.