ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:31 IST
Last Updated 9 ನವೆಂಬರ್ 2021, 8:31 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಚೆ ನೌಕರರು ಮಂಗಳವಾರ ಹುಬ್ಬಳ್ಳಿಯಲ್ಲಿ ಧರಣಿ ನಡೆಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಚೆ ನೌಕರರು ಮಂಗಳವಾರ ಹುಬ್ಬಳ್ಳಿಯಲ್ಲಿ ಧರಣಿ ನಡೆಸಿದರು   

ಹುಬ್ಬಳ್ಳಿ: ಕಾರ್ಮಿಕರ ಸಂಘಟನೆ ಮೇಲೆ ನಿಯಂತ್ರಣ ಹೇರಲು ಒಬ್ಬ ವ್ಯಕ್ತಿ ಎರಡು ಅವಧಿಗೆ ಮಾತ್ರ ಹುದ್ದೆ ಹೊಂದಬೇಕು ಎನ್ನುವ ನಿಯಮ ಜಾರಿಗೆ ತರಲಾಗುತ್ತಿದ್ದು, ಇದನ್ನು ಕೈ ಬಿಡಬೇಕು ಎನ್ನುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಅಂಚೆ ನೌಕರರ ರಾಷ್ಟ್ರೀಯ ಫೆಡರೇಷನ್‌ ಸ್ಥಳೀಯ ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸಾಂಕೇತಿಕ ಧರಣಿ ನಡೆಸಿದ ಅವರು ಒಬ್ಬ ವ್ಯಕ್ತಿ ಎರಡು ವರ್ಷಗಳ ಅವಧಿಗೆ ಎರಡು ಬಾರಿ ಮಾತ್ರ ಹುದ್ದೆ ಹೊಂದಬೇಕು ಎನ್ನುವ ನಿಯಮ ಸರಿಯಲ್ಲ. ಇದರಿಂದ ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಆಗುವುದಿಲ್ಲ. ಇದು ಕಾರ್ಮಿಕ ಸಂಘಟನೆ ಮೇಲೆ ನಿಯಂತ್ರಣ ಹೇರುವ ತಂತ್ರವಾಗಿದೆ ಎಂದು ಧರಣಿ ನಿರತರು ಆರೋಪಿಸಿದರು.

ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಬಾರದು, ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೇ ಮಾದರಿಯಲ್ಲಿಯೇ ಪಿಂಚಣಿ ನೀಡಬೇಕು, ಕೋವಿಡ್‌ ಚಿಕಿತ್ಸೆಗಾಗಿ ವಿಶೇಷ ರಜೆ ಮಂಜೂರು ಮಾಡಬೇಕು, ಕೋವಿಡ್‌ನಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ₹10 ಲಕ್ಷ ಪರಿಹಾರ ನೀಡಬೇಕು, ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಉಳಿದ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಒಟ್ಟು 19 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಧರಣಿ ನಡೆಸಿದರು.

ADVERTISEMENT

ಫೆಡರೇಷನ್‌ ಕಾರ್ಯದರ್ಶಿ ಮಂಜುನಾಥ ವಿ. ಮಹೇಂದ್ರಕರ್, ಉಪಾಧ್ಯಕ್ಷ ಎಂ.ಡಿ. ದೊಡ್ಡಮನಿ, ಖಜಾಂಚಿ ರಾಘವೇಂದ್ರ ವೈ., ಕಾರ್ಯದರ್ಶಿ (ಪೋಸ್ಟಮನ್‌ ಮತ್ತು ಎಂಟಿಎಸ್‌ ವಿಭಾಗ) ಮಾರುತಿ ಬ್ಯಾಹಟ್ಟಿ, ಸಂಯೋಜಕ ಎ.ಎನ್‌. ದೇಸಾಯಿ, ಸದಸ್ಯರಾದ ಪರಿಮಳಾ ಪಂಚಮುಖಿ, ಸುಮಾ ಮಹಾಜನಶೆಟ್ಟರ್, ಎ.ವೈ. ಭಜಂತ್ರಿ, ಮಲ್ಲಪ್ಪ ನರಗುಂದ, ಆನಂದ ಹೊಸಮನಿ, ಎನ್‌.ಕೆ. ವಡ್ಡೆಲ್ಲಪ್ಪನವರ ಹಾಗೂ ಸುನಿತಾ ಶೇಟ್‌ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.