ಹುಬ್ಬಳ್ಳಿ: ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹದಿಂದ ನೆಲೆ ಕಳೆದುಕೊಂಡಿದ್ದ ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನ ಸಿಂಧು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ನಗರದ ಸರ್ಕಾರಿ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ.
ಪ್ರವಾಹ ಬಂದಾಗ ಒಟ್ಟು 75 ಅಂಧ ವಿದ್ಯಾರ್ಥಿಗಳು ಜ್ಞಾನ ಸಿಂಧು ಶಾಲೆಯಲ್ಲಿದ್ದರು. ಅದರಲ್ಲಿ 22 ಬಾಲಕ ಮತ್ತು 29 ಬಾಲಕಿಯರಿಗೆ ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ವಸತಿ ಕಲ್ಪಿಸಲಾಗಿತ್ತು. ಉಳಿದವರು ತಮ್ಮೂರಿಗೆ ಹೋಗಿದ್ದರು. ಈ ಕುರಿತು ಪ್ರಜಾವಾಣಿ ಬುಧವಾರ ‘ಪ್ರವಾಹ; ಅಂಧ ಮಕ್ಕಳ ಬದುಕು ಬೀದಿಗೆ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಗದಗ ಹಾಗೂ ಧಾರವಾಡ ಅಂಗವಿಕಲರ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ಸ್ಥಳಾಂತರಿಸಿದರು.
‘ನಮ್ಮ ವಸತಿ ನಿಲಯದ ಮಕ್ಕಳ ಜೊತೆಗೆ ಜ್ಞಾನಸಿಂಧು ಶಾಲೆಯ ಮಕ್ಕಳು ಕೂಡ ಇದ್ದಾರೆ. ಅವರಿಗೆ ಎಷ್ಟು ದಿನ ಬೇಕೂ, ಅಷ್ಟು ದಿನ ಇರಲು ವ್ಯವಸ್ಥೆ ಮಾಡಲಾಗಿದೆ’ ಎಂದು ಸರ್ಕಾರಿ ಅಂಧಶಾಲೆಯ ಮುಖ್ಯ ಶಿಕ್ಷಕ ಅಣ್ಣಪ್ಪ ಕೋಳಿ ತಿಳಿಸಿದರು.
‘ನಮಗಾದ ಸಮಸ್ಯೆ ಬಗ್ಗೆ ಯಾರನ್ನೂ ದೂರುವುದಿಲ್ಲ. ಈಗ ವಸತಿ ವ್ಯವಸ್ಥೆ ದೊರೆತಿದೆ. ಹೊಳೆಆಲೂರಿನ ವಸತಿ ನಿಲಯ ಸ್ವಚ್ಛ ಮಾಡಲಾಗಿದೆ. ಸುಣ್ಣ ಬಳಿದ ನಂತರ ಎರಡ್ಮೂರು ದಿನಗಳಲ್ಲಿ ಅಲ್ಲಿಗೆ ಹೋಗುತ್ತೇವೆ’ ಎಂದು ಶಾಲೆಯ ಮುಖ್ಯಸ್ಥ ಶಿವಾನಂದ ಕೇಲೂರು ಹಾಗೂ ಶಿಕ್ಷಕಿ ಬಸಮ್ಮ ಚಿಕ್ಕನ್ನವರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.