ADVERTISEMENT

ಕರಿಯಮ್ಮದೇವಿ ಜಾತ್ರೆಯಲ್ಲಿ ಮಳೆ–ಬೆಳೆಗೆ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 10:20 IST
Last Updated 9 ಜುಲೈ 2019, 10:20 IST
ಜಾತ್ರೆಯಲ್ಲಿ ಕರಿಯಮ್ಮದೇವಿ ದರ್ಶನ ಪಡೆದು ಭಕ್ತಿಪೂರ್ವಕವಾಗಿ ನಮಿಸಿದ ಮಹಿಳೆಯರು
ಜಾತ್ರೆಯಲ್ಲಿ ಕರಿಯಮ್ಮದೇವಿ ದರ್ಶನ ಪಡೆದು ಭಕ್ತಿಪೂರ್ವಕವಾಗಿ ನಮಿಸಿದ ಮಹಿಳೆಯರು   

ಹುಬ್ಬಳ್ಳಿ: ನಗರದ ಗಣೇಶಪೇಟೆಯಲ್ಲಿರುವ ಕರಿಯಮ್ಮದೇವಿ ಬಂಡಿ ಜಾತ್ರೆ ಹಾಗೂ ಉಡಿ ತುಂಬುವ ಉತ್ಸವದಲ್ಲಿ ಮಂಗಳವಾರ ಭಕ್ತರು ಮಳೆ ಮತ್ತು ಬೆಳೆಗಾಗಿ ದೇವಿಯಲ್ಲಿ ಪ್ರಾರ್ಥಿಸಿದರು.

ಮಧ್ಯಾಹ್ನ 2.45ಕ್ಕೆ ಅಲಂಕೃತ ಜೋಡಿತ್ತಿನ ಬಂಡಿಯಲ್ಲಿ ದೇವಿಯನ್ನು ಚಿತ್ರವನ್ನು ಪ್ರತಿಷ್ಠಾಪಿಸಿ, ಬಂಡಿಯ ಮೇಲೆ ನಾಲ್ಕು ದಿಕ್ಕಿಗೆ ನಾಲ್ವರು ಹೆಣ್ಣು ವೇಷಾಧಾರಿ ಗಂಡು ಮಕ್ಕಳನ್ನು ಕೂಡಿಸಲಾಯಿತು. ಚಕ್ರಾಕಾರವಾಗಿ ಬಂಡಿ ಸುತ್ತುತ್ತಾ ಹೋದಂತೆ, ಭಕ್ತರು ದೇವಿಗೆ ಜೈಕಾರ ಹಾಕುತ್ತಾ ಕೈ ಮುಗಿದು ಸಾಗಿದರು.

ನಾಡಿಗೆ ಚನ್ನಾಗಿ ಮಳೆ ಸುರಿದು, ಸಮೃದ್ಧವಾಗಿ ಬೆಳೆ ಕರುಣಿಸಪ್ಪಾ ಮಳೆರಾಯ ಎಂಬ ಭಕ್ತರ ಪ್ರಾರ್ಥನೆಯೊಂದಿಗೆ ಬಂಡಿ ಸಾಗಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡೊಳ್ಳಿನ ಮೇಳ, ಮರಕಾಲು ಕುದುರೆ ಕುಣಿತ, ಜಾಂಝ್ ಮೇಳ, ಲಾಟಿ ಮೇಳ ಹಾಗೂ ಮಲ್ಲಕಂಬದವರು ಮೆರವಣಿಗೆಗೆ ಸಾಥ್ ನೀಡಿದರು.

ADVERTISEMENT

ಇದಕ್ಕೂ ಮುಂಚೆ ಬೆಳಿಗ್ಗೆ 6ಕ್ಕೆ ಕರಿಯಮ್ಮದೇವಿಯ ಉದ್ಭವ ಜಾಗೃತಾ ಮೂರ್ತಿಗೆ ಪಂಚಾಮೃತಾಭಿಷೇಕ ಹಾಗೂ ಮಂಗಲ ಸ್ನಾನ ನೆರವೇರಿತು. 8ಕ್ಕೆ ಅಲಂಕಾರ ಹಾಗೂ ಆರತಿ ಪೂಜೆ, 9ಕ್ಕೆ ಮಹಾ ಮಂಗಳಾರತಿ, ಮುತ್ತೈದೆಯರು ಹಾಗೂ ಜೋಗತಿಯವರಿಂದ ಹರಕೆ ಹಾಗೂ 10ರಿಂದ 12ರವರೆಗೆ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.

‘ಕರಿಯಮ್ಮ ದೇವಿ ದೇವಸ್ಥಾನ ಎರಡು ಶತಮಾನದ ಹಿಂದೆ ಸ್ಥಾಪನೆಯಾಗಿದೆ. ನಮ್ಮ ಪೂರ್ವಿಕರು ಹಿಂದಿನಿಂದಲೂ ಮಳೆ ಮತ್ತು ಬೆಳೆಗಾಗಿ ಪ್ರಾರ್ಥಿಸಿ ಜಾತ್ರೆ ಮಾಡಿಕೊಂಡು ಬರುತ್ತಿದ್ದಾರೆ. ನಾವು ಆ ಪ್ರತೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗಣೇಶಪೇಟೆ ಸುತ್ತಮುತ್ತಲಿನ ರೈತರೆಲ್ಲರೂ ಜಾತ್ರೆಯಲ್ಲಿ ಪಾಲ್ಗೊಂಡು, ದೇವಿಗೆ ಉಡಿ ತುಂಬಿಸುತ್ತಾರೆ’ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಎನ್‌.ಎಂ. ಜಕ್ಕಲಿ ಹೇಳಿದರು.

ಟಸ್ಟ್ ಕಮಿಟಿಯ ಎಫ್‌.ಬಿ. ವಾಲಿಕಾರ, ಕಾರ್ಯದರ್ಶಿ ಜೆ.ಬಿ. ಚಿಕ್ಕಣ್ಣವರ, ಸಹ ಕಾರ್ಯದರ್ಶಿ ಜಿ.ಬಿ. ಗೊರವನಹಳ್ಳಿ, ಕೋಶಾಧಿಕಾರಿ ಎಂ.ಎಲ್. ಮಳಲಿ, ಎಚ್‌.ಡಿ. ವಗ್ಗರ ಹಾಗೂ ಎಚ್.ಟಿ. ಬೆಣಕಲ್ಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.