ಹುಬ್ಬಳ್ಳಿ: ಇಲ್ಲಿಯ ಉಣಕಲ್ನ ಶ್ರೀ ಸದ್ಗುರು ಸಿದ್ಧೇಶ್ವರ ಹೊಸಮಠ ಟ್ರಸ್ಟ್ ಕಮಿಟಿ ವತಿಯಿಂದ ಯುಗಾದಿ ಜಾತ್ರಾ ಮಹೋತ್ಸವ ಅಂಗವಾಗಿ ಏ. 6ರಂದು ಹೆಬ್ಬಳ್ಳಿ ರಸ್ತೆಯ ಸಾಂಗ್ಲಿ ಗುಡಿ ಬಳಿಯ ಹೊಲದಲ್ಲಿ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಟ್ರಸ್ಟ್ ಮುಖ್ಯಸ್ಥ ರಾಜಣ್ಣ ಕೊರವಿ ಹೇಳಿದರು.
‘ಪ್ರಥಮ ಬಹುಮಾನ ಹೊಂಡಾ ಶೈನ್–125 ಬೈಕ್, ದ್ವಿತೀಯ ಬಹುಮಾನ ಹೊಂಡಾ ಶೈನ್–100 ಬೈಕ್, ತೃತೀಯ ಬಹುಮಾನ ಐದು ಗ್ರಾಂ ಚಿನ್ನದ ಉಂಗುರ ನೀಡಲಾಗುವುದು. ಹದಿನೈದನೇ ಸ್ಥಾನದವರೆಗೂ ನಗದು ಬಹುಮಾನ ಹಾಗೂ ಸಮಾಧಾನಕರವಾಗಿ ಎರಡು ಕ್ವಿಂಟಲ್ ಹುರಳಿ ನೀಡಲಾಗುತ್ತದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದು, ಮೂರುಸಾವಿರಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂತೋಷ ಲಾಡ್, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರೆಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಮಾರ್ಚ್ 31ರಿಂದ ಏ. 3ರವರೆಗೆ ಶ್ರೀಮಠದ ಹಿಂಭಾಗ ಪ್ರತಿದಿನ ಸಂಜೆ 4 ಗಂಟೆಯಿಂದ ‘ಭಾರಿ ಬಯಲು ಜಂಗೀ ಕಾಟಾ ನಿಕಾಲಿ ಕುಸ್ತಿ’ ಸ್ಪರ್ಧೆ ಏರ್ಪಡಿಸಲಾಗಿದೆ. ಸಾಂಗ್ಲಿ, ಕೊಲ್ಲಾಪುರ, ಬೆಳಗಾವಿ, ಧಾರವಾಡ, ರಾಣಿಬೆನ್ನೂರು, ಶಿಕಾರಿಪುರದ ಪೈಲ್ವಾನರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ₹15,001, ದ್ವಿತೀಯ ₹10,001, ತೃತೀಯ ₹7,501 ಹಾಗೂ ಚತುರ್ಥ ₹5,001 ನಗದು ಬಹುಮಾನ ನೀಡಲಾಗುವುದು. ಮಾರ್ಚ್ 31ರಂದು ಸಂಜೆ 4 ಗಂಟೆಗೆ ವಾಲ್ಮೀ ಮಾಜಿ ಅಧ್ಯಕ್ಷ ಚನ್ನು ಪಾಟೀಲ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದರು.
‘ಈ ಸ್ಪರ್ಧೆಯಲ್ಲಿ 20 ಕ್ಕೂ ಹೆಚ್ಚು ಬಹುಮಾನ ನೀಡಲಾಗುವುದು. ವಿಶೇಷವಾಗಿ ಸ್ಥಳೀಯ ಎತ್ತುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂರು ವಿಶೇಷ ಬಹುಮಾನ ನೀಡಲಾಗುತ್ತಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 94484 42663, 95350 31405 ಸಂಪರ್ಕಿಸಬಹುದು’ ಎಂದರು.
ಶಿವಾಜಿ ಕಣ್ಣಿಕೊಪ್ಪ, ಎಸ್.ಐ.ನೇಕಾರ, ರವಿ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.