ಹುಬ್ಬಳ್ಳಿ: ಪಶುಪಾಲಕರು ಹಾಗೂ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಕುರುಬ ಸಮಾಜದ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಚನ್ನಮ್ಮ ವೃತ್ತದಲ್ಲಿ ಕುರಿಗಳೊಂದಿಗೆ ಸಮಾವೇಶಗೊಂಡ ಪ್ರತಿಭಟನಾಕಾರರು, ಕೆಲ ಸಮಯ ರಸ್ತೆ ತಡೆ ನಡೆಸಿದರು. ತಾಲ್ಲೂಕು ಆಡಳಿತಸೌಧದವರೆಗೆ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಿದ್ದು ತೇಜಿ, ‘ಪಶು ಹಾಗೂ ಕುರಿ ಪಾಲನೆ ಮಾಡುವವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಕುಂದಗೋಳದಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರ, ಬಸವ ಕಲ್ಯಾಣದಲ್ಲಿ ನಡೆದ ಹತ್ಯೆ ಇದಕ್ಕೆ ಉದಾಹರಣೆ. ಅಲ್ಲದೆ, ಜಾನುವಾರು, ಕುರಿಗಳನ್ನು ಮೇಯಿಸಲು ಗುಡ್ಡಗಾಡಿಗೆ ತೆರಳಿದಾಗ ದೌರ್ಜನ್ಯ ಎಸಗಲಾಗುತ್ತಿದೆ’ ಎಂದು ಹೇಳಿದರು.
‘ಕುರಿಗಳ ಕಳವು ಹೆಚ್ಚುತ್ತಿದ್ದು, ಪಶು ಹಾಗೂ ಕುರಿ ಪಾಲಕರ ಬದುಕುವ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯವರಿಂದಲೂ ಶೋಷಣೆ ನಡೆಯುತ್ತಿದ್ದು, ಲಂಚ ಕೇಳಿದ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗಳು ನಡೆದಿವೆ. ಹಲವಾರು ಕುಟುಂಬಗಳು ಇದೇ ಕೆಲಸ ನಂಬಿ, ಜೀವನ ಸಾಗಿಸುತ್ತಿರುವುದರಿಂದ ಸರ್ಕಾರ ಇವರ ನೆರವಿಗೆ ಧಾವಿಸಬೇಕು. ಕಾಯ್ದೆ ಮೂಲಕ ಅವರ ಸಂರಕ್ಷಣೆ ಮಾಡಬೇಕು. ಕಾಡುಪ್ರಾಣಿಗಳು ಇಲ್ಲದ ಕಡೆ ಪಶು, ಕುರಿ ಮೇಯಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ರವಿರಾಜ ಕಂಬಳಿ, ಯಲ್ಪಪ್ಪ ಹೆಗಡೆ, ಬಸವರಾಜ ಕುರಿಗಾರ, ಎಚ್.ಕೆ. ದೊಡ್ಡಮನಿ, ಯಲ್ಲಪ್ಪ ನರಗುಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.