ಹುಬ್ಬಳ್ಳಿ: ‘ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿ ಬಳಿಯಿರುವ ಧ್ವಜಾರೋಹಣ ಕಂಬ ಶಿಥಿಲ ಸ್ಥಿತಿಯ್ಲಲ್ಲಿದ್ದು, ಯಾವುದೇ ಕ್ಷಣ ಬೀಳುವ ಸಾಧ್ಯತೆಯಿದೆ. ಬುಧವಾರ ರಾತ್ರಿಯೊಳಗೆ ಹೊಸ ಕಂಬ ಅಳವಡಿಸಬೇಕು. ಇಲ್ಲದಿದ್ದರೆ ಪಾಲಿಕೆ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕ, ಮಾಲಕರ ಸಂಘ ಎಚ್ಚರಿಸಿದೆ.
ಭಾನುವಾರ ತಡರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು, ‘ಕನ್ನಡ ಧ್ವಜ ಹಾರಿಸುವ ಕಂಬ ಹಾಳಾಗಿರುವುದು ಗಮನಕ್ಕಿದ್ದರೂ, ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ‘1992ರಲ್ಲಿ ಚನ್ನಮ್ಮ ಮೂರ್ತಿ ಎದುರು ಕನ್ನಡ ಧ್ವಜ ಹಾರಿಸಲು ಕಂಬ ಅಳವಡಿಸಲಾಗಿತ್ತು. ಅಲ್ಲಿ ಕನ್ನಡದ ಧ್ವಜ ಹಾರಿಸಿ, ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಎರಡು–ಮೂರು ವರ್ಷಗಳಿಂದ ಕಂಬ ಅಲುಗಾಡುತ್ತಿದ್ದು, ಬೀಳುವ ಸ್ಥಿತಿಯಲ್ಲಿದೆ. ಹಿಂದಿನ ಮೇಯರ್ ಅವರಿಗೆ ಮನವಿ ಸಲ್ಲಿಸಿ, ₹25 ಸಾವಿರ ವೆಚ್ಚದಲ್ಲಿ 20 ಅಡಿ ಎತ್ತರದ ಹೊಸ ಕಂಬ ಸಿದ್ಧಪಡಿಸಲಾಗಿತ್ತು. ಆದರೆ, ಈವರೆಗೆ ಅದನ್ನು ಅಳವಡಿಸಲಾಗಿಲ್ಲ’ ಎಂದರು.
‘ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲಿಕೆ ಆಯುಕ್ತರಿಗೆ, ಮೇಯರ್ ಅವರಿಗೆ ವಿಷಯ ತಿಳಿಸಿದ್ದು, ಭಾನುವಾರ ಹೊಸ ಕಂಬ ಅಳವಡಿಕೆ ಬಗ್ಗೆ ಭರವಸೆ ಸಿಕ್ಕಿತ್ತು. ಆದರೆ, ಅವರು ಮಾತಿಗೆ ತಪ್ಪಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.