ಹುಬ್ಬಳ್ಳಿ: ಹಿರಿಯ ಸಾಹಿತಿ, ಸಂಶೋಧಕ ಹಾಗೂ ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ವಿ. ಶಿರೂರ ಅವರಿಗೆ ಗದುಗಿನ ಕಪ್ಪತಗುಡ್ಡ ಶ್ರೀ ಸಂದಿವೇರಿಮಠ ಸೇವಾ ಪ್ರತಿಷ್ಠಾನ ಮತ್ತು ಹುಬ್ಬಳ್ಳಿಯ ಶರಣ ಸಂಕುಲದ ವತಿಯಿಂದ ಶುಕ್ರವಾರ ನಗರದಲ್ಲಿ ‘ರಮಣಶ್ರೀ ಶರಣ ಪ್ರಶಸ್ತಿ–2022’ ನೀಡಿ ಸನ್ಮಾನಿಸಲಾಯಿತು.
ಇಲ್ಲಿನ ಗೋಕುಲರಸ್ತೆಯ ಯಾತ್ರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಿ.ವಿ. ಶಿರೂರ, ‘ಪ್ರಶಸ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಅದರ ಪಾಡಿಗೆ ಅದು ಬರುತ್ತದೆ ಹೋಗುತ್ತದೆ. ಆದರೆ, ನಾವು ಮಾಡುವ ಕಾಯಕ ನಮಗೆ ಆತ್ಮತೃಪ್ತಿ ನೀಡುವಂತಿರಬೇಕು. ರಮಣಶ್ರೀ ಪ್ರಶಸ್ತಿ ದೊರಕಿದ್ದು ನನಗೆ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಪ್ರೇರಣೆಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಎಸ್. ಬಂಡಾರಗಲ, ‘ಹಿಂದಿನ ಘಟನೆಗಳ ಬಗ್ಗೆ ಚಿಂತಿಸದೆ ಮುಂದಿನ ಕಾರ್ಯಗಳ ಬಗ್ಗೆ ಯೋಚಿಸಬೇಕು. ಹಿಂದಾದ ಅವಮಾನಗಳನ್ನು ನೆನಪಿಸಿಕೊಳ್ಳುವ ಬದಲು, ಉತ್ತಮ ಕೆಲಸಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಸಿ. ಇಂಡಿ, ಶರಣತತ್ವ ಚಿಂತಕಿ ಸುನಿಲಾತಾಯಿ ಬ್ಯಾಹಟ್ಟಿ, ರಾಜು ಅಣ್ಣೆಪ್ಪನವರ, ಶಂಕರ ಕೋಳಿವಾಡ, ಲಕ್ಷ್ಮೀಕಾಂತ ಪಾಟೀಲ, ಡಾ. ವಿ.ಬಿ. ನೀಟಾಲಿ, ಕಮಡೊಳ್ಳಿ, ಜ್ಯೋತಿ ಅಣ್ಣೆಪ್ಪನವರ, ಉಮಾ ಹುಲಿಕಂತಿಮಠ, ಡಾ. ರಾಮು ಮೂಲಗಿ, ಬಸವರಾಜ ಯಕಲಾಸಪೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.