ADVERTISEMENT

ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ: ಬಿಜೆಪಿ ಕಾರ್ಯಕರ್ತರಿಗೆ ಜೋಶಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 9:11 IST
Last Updated 19 ಜೂನ್ 2022, 9:11 IST
 ‘ವಿಕಾಸ ತೀರ್ಥ’ ಬೈಕ್ ರ‍್ಯಾಲಿಗೆ ಪ್ರಲ್ಹಾದ ಜೋಶಿ ಚಾಲನೆ
‘ವಿಕಾಸ ತೀರ್ಥ’ ಬೈಕ್ ರ‍್ಯಾಲಿಗೆ ಪ್ರಲ್ಹಾದ ಜೋಶಿ ಚಾಲನೆ   

ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರು ಮೊದಲು ಅಧ್ಯಯನ ಮಾಡಬೇಕು. ನಂತರ, ಮನೆಮನೆಗೂ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಬಿಜೆಪಿ ಪೂರ್ವ ಕ್ಷೇತ್ರದ ಯುವ ಮೋರ್ಚಾ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಕಾಸ ತೀರ್ಥ’ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮೊದಲ ಭಾಷಣದಲ್ಲೇ ಮೋದಿ ಅವರು, ತಮ್ಮ ಸರ್ಕಾರ ಬಡವರಿಗೆ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಗರೀಬ್ ಕಲ್ಯಾಣ ಯೋಜನೆಯಿಂದಿಡಿದು ಉಜ್ವಲದವರೆಗೆ ಬಡವರ ಪರವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ’ ಎಂದರು.

ADVERTISEMENT

‘ಮೋದಿ ಅವರು ದೇಶದ ಚುಕ್ಕಾಣಿ ಹಿಡಿದಾಗಿನಿಂದ ಹಲವು ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ರಾಜಕೀಯ ಭ್ರಷ್ಟಾಚಾರವನ್ನು ತೊಡೆದು ಹಾಕಿರುವುದು ದೊಡ್ಡ ಸಾಧನೆ.‌ ರಫೆಲ್‌ ಯುದ್ಧ ವಿಮಾನಗಳಿಂದಾಗಿ ಇಂದು ನಮ್ಮ ವಾಯುಪಡೆಯು ಬಲಾಢ್ಯವಾಗಿದೆ’ ಎಂದು ಹೇಳಿದರು.

ಮೂರುಸಾವಿರ ಮಠದ ಆವರಣದಿಂದ ಆರಂಭವಾದ ರ‍್ಯಾಲಿಯು ಎಸ್.ಟಿ. ಭಂಡಾರಿ ವೃತ್ತ, ತುಳಜಾ ಭವಾನಿ ವೃತ್ತ, ಸುಭಾಸ ಚೌಕ, ದುರ್ಗದ ಬೈಲ್, ಜವಳಿ ಸಾಲ, ಸರಾಫ ಗಟ್ಟಿ, ಬೊಮ್ಮಾಪುರ ಓಣಿ, ನ್ಯೂ ಇಂಗ್ಲಿಷ್ ಸ್ಕೂಲ್, ಹಳೇ ಹುಬ್ಬಳ್ಳಿ, ಜಂಗ್ಲಿಪೇಟೆ, ಬಾಣತಿಕಟ್ಟಾ ಮಾರ್ಗದಲ್ಲಿ ಸಾಗಿ ನೇಕಾರ ನಗರದಲ್ಲಿ ಅಂತ್ಯಗೊಂಡಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಕ್ಷದ ಪೂರ್ವ ಘಟಕದ ಅಧ್ಯಕ್ಷ ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮುಖಂಡರಾದ ಅಶೋಕ ಕಾಟವೆ, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ, ಸತೀಶ ಶೇಜವಾಡಕರ, ದೀಪಕ ಮೆಹರವಾಡೆ, ಉಮೇಶ ದುಶಿ, ಸಂಗಮೇಶ ಅಂಜಿ, ರವಿ ಕೊಪ್ಪಳ, ರಾಜು ಕೋರ್ಯಾನಮಠ, ಪ್ರಕಾಶ ಶೃಂಗೇರಿ, ಜಗದೀಶ ಬುಳ್ಳಾನವರ, ಪ್ರೀತಂ ಅರಕೇರಿ, ಅಶೋಕ ಕಾಟವೆ, ಮಹೇಂದ್ರ ಕೌತಾಳ, ಲಕ್ಷ್ಮಿಕಾಂತ ಘೋಡಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.