ನವಲಗುಂದ: ‘ಶಾಲಾ ಮಕ್ಕಳ ಆಹಾರ ಮೇಳದಿಂದ ಮಕ್ಕಳಿಗೆ ವ್ಯವಹಾರ ಜ್ಞಾನದ ಜೊತೆಗೆ, ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿದೆ. ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಪೋಷಕರು ಅಡುಗೆ ಮಾಡುವಾಗ ಮಕ್ಕಳು ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ’ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಅಲಿ ಮಕಾಂದಾರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 2ರ ಆವರಣದಲ್ಲಿ ಶುಕ್ರವಾರ ಜರುಗಿದ ಮಕ್ಕಳಿಂದ ಆಹಾರ ತಯಾರಿಕೆ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂಥ ಕಾರ್ಯಕ್ರಮಗಳ ಮೂಲಕ ತರಕಾರಿ ಹಾಗೂ ಅಡುಗೆ ಪದಾರ್ಥಗಳ ಬಗ್ಗೆ ವಿಶೇಷ ಆಸಕ್ತಿ ಮೂಡಲು ಸಹಕಾರಿಯಾಗಲಿದೆ. ಈ ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ಮೇಳ ಆಯೋಜಿಸಲಾಗುವುದು’ ಎಂದರು.
ಮಕ್ಕಳಿಂದ ನಡೆದ ಆಹಾರ ಮೇಳಕ್ಕೆ ಶಾಲಾ ಶಿಕ್ಷಕಿಯರು ಹಾಗೂ ಪೋಷಕರು ಮಾರ್ಗದರ್ಶನ ಮಾಡಿದರು.
ಎಸ್ಡಿಎಂಸಿ ಉಪಾಧ್ಯಕ್ಷ ಅನ್ವರ್ ಮೂಲಿಮನಿ, ಸದಸ್ಯರಾದ ಶರೀಫ್ಸಾಬ್ ಕಲಬುರ್ಗಿ, ಮೋದಿನಸಾಬ್ ನಾಶಿಪುಡಿ, ಶಿರಾಜ್ ನದಾಫ್, ಅಲ್ಲಾಬಕ್ಷ ಅವರಾಧಿ, ಮಾಬುಲಿ ಪಟವೇಗಾರ, ಶೌಕತ್ ಅಲಿ ನದಾಫ್, ಮುಖ್ಯಾಧ್ಯಾಪಕಿ ಎಚ್.ಎಚ್.ಜಕ್ಕಲಿ, ಶಿಕ್ಷಕಿಯರಾದ ಮಹೇಜಬೀನ್ ಹಲ್ವಾಯಿ, ಜೆ.ಎ.ರಂಗಣ್ಣವರ ಇದ್ದರು.
ಆಹಾರ ಮೇಳದಲ್ಲಿ ತರಕಾರಿ ಸಲಾಡ್, ಪಾನಿಪೂರಿ, ದೋಸೆ, ಕೋಸಂಬರಿ, ಪಾನಕ ಸೇರಿದಂತೆ ಹಲವು ಬಗೆಯ ಆಹಾರಗಳನ್ನು ಮಕ್ಕಳು ಉತ್ಸಾಹದಿಂದ ಸಿದ್ಧಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.