ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆ ಬಳಿ ಬೈಪಾಸ್ ಮೇಲ್ಸೇತುವೆ ಕಾಮಗಾರಿ ವೇಳೆ ಸೆಂಟ್ರಿಂಗ್ ಪ್ಲೇಟ್, ಭದ್ರತಾ ಸಿಬ್ಬಂದಿ ಬಸವರಾಜ ಸಜ್ಜನ ಅವರ ತಲೆ ಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಕೆಎಂಸಿ–ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮಧ್ಯಾಹ್ನ 12ರ ವೇಳೆ ಅವಘಡ ಸಂಭವಿಸಿದೆ. ನೇಕಾರ ನಗರದ ಬಸವರಾಜ ಅವರು ಮಾಸ್ಟರ್ ಸೆಕ್ಯೂರಿಟಿ ಏಜೆನ್ಸಿ ಅಡಿ ಭದ್ರತಾ ಸಿಬ್ಬಂದಿಯಾಗಿ, ಐದು ತಿಂಗಳಿನಿಂದ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಾಮಗಾರಿ ವೇಳೆ ಸಾರ್ವಜನಿಕರು ಕೆಳಗಡೆ ಬಾರದಂತೆ ನೋಡಿಕೊಳ್ಳಲು ಕಾಮಗಾರಿ ಗುತ್ತಿಗೆ ಪಡೆದ ಆರ್ಎನ್ಸಿ ಕಂಪನಿ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಏಜೆನ್ಸಿ ಮೂಲಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು. ಎಂದಿನಂತೆ ಬಸವರಾಜ ಅವರು ಗುರುವಾರ ಸಹ ಅಲ್ಲಿ ಕೆಲಸ ಮಾಡುತ್ತಿದ್ದಾಗ, ಗರ್ಡರ್ಗಳಿಗೆ ಪ್ಲಾಸ್ಟರ್ ಮಾಡಲು ಅಳವಡಿಸಿದ್ದ ಸೆಂಟ್ರಿಂಗ್ ಪ್ಲೇಟ್ ಏಕಾಏಕಿ ಅವರ ತಲೆ ಮೇಲೆ ಬಿದ್ದಿದೆ. 30 ಅಡಿ ಎತ್ತರದಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ, ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಕೆಎಂಸಿ–ಆರ್ಐ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಹಳೇ ಕೋರ್ಟ್ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಕಳೆದ ವರ್ಷ ಸೆ.10ರಂದು ಉಪನಗರ ಠಾಣೆಯ ಎಎಸ್ಐ ನಾಬಿರಾಜ್ ಅವರ ತಲೆ ಮೇಲೆ ರಾಡ್ ಬಿದ್ದು ಮೃತಪಟ್ಟಿದ್ದರು. ಇದೀಗ, ಭದ್ರತಾ ಸಿಬ್ಬಂದಿಯ ತಲೆ ಮೇಲೆ ಸೆಂಟ್ರಿಂಗ್ ಪ್ಲೇಟ್ ಬಿದ್ದಿರುವುದು, ಸುರಕ್ಷತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.