ಹುಬ್ಬಳ್ಳಿ: ಸುರಕ್ಷತೆ ದೃಷ್ಟಿಯಿಂದ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು ಸ್ವಯಂ ಸುರಕ್ಷತೆಗೆ ತರಬೇತಿ ನೀಡುವ ಕೆಲಸವನ್ನು ಕೆಎಸ್ ಆರ್ ಪಿಗೆ ವಹಿಸಲಾಗುವುದು. ಪೊಲೀಸ್ ತರಬೇತಿ ಶಾಲೆಗಳಲ್ಲಿ ಕೆಲಸ ಮಾಡಿದ ನಿವೃತ್ತ ಪ್ರಾಂಶುಪಾಲರನ್ನು ತರಬೇತಿ ನೀಡಲು ಬಳಸಿಕೊಳ್ಳಲಾಗುವುದು ಎಂದರು.
ಕೇರಳ ಹಾಗೂ ಉತ್ತರಾಖಂಡ ಭೂ ಕುಸಿತ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಈ ಕುರಿತು ಕೇರಳ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಅಗತ್ಯ ನೆರವು ನೀಡುವುದಾಗಿಯೂ ತಿಳಿಸಿದ್ದೇನೆ ಎಂದರು.
ಉತ್ತರಾಖಂಡದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗಾಗಿ ಕ್ರಮಕೈಗೊಳ್ಳಲಾಗಿದೆ. ತುಷಾರ್ ಗಿರಿನಾಥ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಉಪಚುನಾವಣೆ ಪ್ರಚಾರದಲ್ಲಿ ವೈಯಕ್ತಿಕ ನಿಂದನೆಗಳೇ ಹೆಚ್ಚಾಗುತ್ತಿವೆಯಲ್ಲ ಎನ್ನುವ ಪ್ರಶ್ನೆಗೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಚುನಾವಣೆ ಜನರ ಧ್ವನಿಯಾಗಿದೆ. ಜನರ ಹಾಗೂ ಕ್ಷೇತ್ರದ ಅಭಿವೃಧ್ದಿಗೆ ಸೀಮಿತರಾದರೆ ಜನಪ್ರತಿನಿಧಿಗಳಿಗೆ ಒಳ್ಳೆಯದು. ಜನರ ಮನಸ್ಸು ಗೆಲ್ಲುವ ಮಾತಗಳನ್ನಾಡಬೇಕೆ ಹೊರತು ಇನ್ನೊಬ್ಬರನ್ನು ನಿಂದಿಸುವ ಕೆಲಸ ಮಾಡಬಾರದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.