ಹುಬ್ಬಳ್ಳಿ: ‘ಕಾಂಗ್ರೆಸ್ ನಾಯಕರು ಮಾಡಿದ ಕೆಲವು ತಪ್ಪುಗಳೇ ಸರ್ಕಾರದಲ್ಲಿ ಈಗ ಉಂಟಾಗಿರುವ ಗೊಂದಲಗಳಿಗೆ ಕಾರಣ. ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕಡೆಗಣಿಸಿದ್ದು (ಸೈಡ್ಲೈನ್) ಹಾಗೂ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದು ತಪ್ಪು’ ಎಂದು ಜೆಡಿಎಸ್ನ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೊಂಡು ರಮೇಶ ಜಾರಕಿಹೊಳಿ ಅಡ್ಡಾಡುತ್ತಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ತೆಗೆಯುವ ಅಗತ್ಯ ಇರಲಿಲ್ಲ. ನಾಯಕರು ಮಾಡಿದ ಇಂತಹ ಹಲವು ತಪ್ಪುಗಳೇ ಈಗ ಎದ್ದಿರುವ ಅಪಸ್ವರಕ್ಕೆ ಕಾರಣ’ ಎಂದು ಅವರು ಹೇಳಿದರು.
ಲಿಂಗಾಯತ ಅಭ್ಯರ್ಥಿಗೆ ಮತ ಹಾಕುವಂತೆ ಲೋಕಸಭಾ ಚುನಾವಣೆಯಲ್ಲಿ ಜಾತಿ ರಾಜಕೀಯ ಮಾಡಲಾಯಿತು, ಈಗ ಕುಂದಗೋಳದಲ್ಲಿ ಲಿಂಗಾಯತ ಅಭ್ಯರ್ಥಿ ಪರ ಮತ ಕೇಳುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಯಾರೂ ಜಾತಿ ರಾಜಕಾರಣ ಮಾಡಿಲ್ಲ. ಬರೀ ಜಾತಿಯ ಮೇಲೆಯೇ ಮತ ಕೇಳಲು ಆಗದು. ಜನರು ಸಹ ಜಾತಿ ನೋಡಿಕೊಂಡೇ ಮತ ಹಾಕುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.