ಹುಬ್ಬಳ್ಳಿ: ಪುರಾತನ ಫಿಲಂಸ್ ಹಾಗೂ ಎಸ್ಆರ್ಕೆ ಫಿಲಂಸ್ ಸಹಯೋಗದಲ್ಲಿ ನಿರ್ಮಿಸಿರುವ, ಪ್ರಣಂ ದೇವರಾಜ್ ಹಾಗೂ ರಂಗಾಯಣ ರಘು ಅವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಆಗಸ್ಟ್ 22ರಂದು ರಾಜ್ಯದಾದ್ಯಂತ ತೆರೆ ಬಿಡುಗಡೆಯಾಗಲಿದೆ.
‘ತಂದೆ ಮತ್ತು ಮಗನ ನಡುವಿನ ಬಾಂಧವ್ಯ ಕುರಿತ ಕಥಾಹಂದರ ಇರುವ ಸಿನಿಮಾ ಇದು’ ಎಂದು ಪೋಷಕ ನಟ ರಂಗಾಯಣ ರಘು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಾಯಕ ನಟನಾಗಿ ಪ್ರಣಂ ದೇವರಾಜ್, ನಾಯಕಿಯಾಗಿ ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ನಾನು ನಾಯಕನ ತಂದೆ ಪಾತ್ರ ನಿರ್ವಹಿಸಿದ್ದೇನೆ. ಸುಚೇಂದ್ರ ಪ್ರಸಾದ್, ಗಿರೀಶ ಶಿವಣ್ಣ, ತಬಲಾ ನಾಣಿ, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಅರುಣ ಚಕ್ರವರ್ತಿ ಅಭಿನಯಿಸಿದ್ದಾರೆ’ ಎಂದರು.
‘ಶ್ರೀಕಾಂತ್ ಹುಣಸೂರು ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಅವರ ಸಾಹಿತ್ಯ, ಸಚಿನ್ ಬಸ್ರೂರ್ –ಸಂಗೀತ, ಸ್ಕೇಟಿಂಗ್ ಕೃಷ್ಣ– ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನ ಚಿತ್ರಕ್ಕಿದೆ’ ಎಂದು ತಿಳಿಸಿದರು.
ನಾಯಕ ನಟ ಪ್ರಣಂ ದೇವರಾಜ್ ಮಾತನಾಡಿ, ‘ಸನ್ ಆಫ್ ಮುತ್ತಣ್ಣ’ ಸಿನಿಮಾ ನನ್ನ ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಚಿತ್ರದ ಹಾಡುಗಳು ಹಾಗೂ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು, ಕಾಶಿ, ವಾರಾಣಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.