ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ಸರಿದೂಗಿಸುವ ಉದ್ದೇಶದಿಂದ ಆ. 16ರಿಂದ ನೈರುತ್ಯ ರೈಲ್ವೆ ಮುಂದಿನ ಮೂರು ತಿಂಗಳ ಅವಧಿಗೆ ಬೆಳಗಾವಿ–ವಾಸ್ಕೋಡಿಗಾಮ ನಡುವೆ ವಾರಕ್ಕೆ ಎರಡು ದಿನ ವಿಶೇಷ ರೈಲು ಸಂಚಾರ ಆರಂಭಿಸಲಿದೆ.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಆಯುಷ್ ಖಾತೆ ರಾಜ್ಯಸಚಿವ (ಸ್ವತಂತ್ರ) ಶ್ರೀಪಾದ್ ಯಸ್ಸೊ ನಾಯಕ್ ಅವರು ಆ. 10ರಂದು ಮಧ್ಯಾಹ್ನ 3 ಗಂಟೆಗೆ ವಾಸ್ಕೋಡಿಗಾಮದಿಂದ ಹೊಸ ರೈಲಿಗೆ ಚಾಲನೆ ನೀಡಲಿದ್ದಾರೆ.
ಪ್ರತಿ ಶುಕ್ರವಾರ ಹಾಗೂ ಶನಿವಾರ ಬೆಳಿಗ್ಗೆ 6.20ಕ್ಕೆ ಬೆಳಗಾವಿಯಿಂದ ಹೊರಡುವ ರೈಲು 12.40ಕ್ಕೆ ವಾಸ್ಕೋಡಿಗಾಮ ತಲುಪಲಿದೆ. ಖಾನಾಪುರ (ಬೆ. 6.49), ಗುಂಜಿ (7.09), ಲೋಂಡಾ (7.45), ತಿನೈಘಾಟ್ (8.10), ಕ್ಯಾಸಲ್ರಾಕ್ (8.40), ಕುಲೇಮ್ (10.20), ಸನ್ವೇರದಮ್ ಕಚ್ (10.50), ಚಾಂದರ್ (11.09), ಮಡಗಾಂವ್ (11.34), ಕ್ಯಾನ್ಸುಲಿಯಮ್ (12.01) ಮತ್ತು ದಾಬೊಲಿಮ್ (12.14) ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
ಪ್ರತಿ ಶುಕ್ರವಾರ ಹಾಗೂ ಶನಿವಾರ ವಾಸ್ಕೋಡಿಗಾಮದಿಂದ ಮ. 3.35ಕ್ಕೆ ಹೊರಟು ರಾತ್ರಿ 9.25ಕ್ಕೆ ಬೆಳಗಾವಿ ಮುಟ್ಟಲಿದೆ.
‘ಹೊಸ ರೈಲು ಸಂಚಾರದಿಂದ ಗೋವಾದಿಂದ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವ್ಯಾಪಾರ ವಹಿವಾಟು, ಪ್ರವಾಸೋದ್ಯಮ ಉತ್ತೇಜನಕ್ಕೆ ನೆರವಾಗಲಿದೆ’ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.