ಹುಬ್ಬಳ್ಳಿಯಲ್ಲಿನ ಉಣಕಲ್ ಕೆರೆಗೆ ಶುಕ್ರವಾರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮೇಯರ್ ರಾಮಪ್ಪ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ ಹಾಗೂ ಪಾಲಿಕೆಯ ಸದಸ್ಯರು ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು
ಹುಬ್ಬಳ್ಳಿ: ‘ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲಿದ್ದು, ಅದರಲ್ಲಿಯೇ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ, ಶಿಕ್ಷಣ ಹಾಗೂ ಮಕ್ಕಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿಯೇ ಇಲ್ಲವಾಗಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಿರಂತರ ಮಳೆಯಿಂದಾಗಿ ನಗರದ ಉಣಕಲ್ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಕೆರೆಗೆ ಗಂಗಾ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.
‘ಶಾಲೆಗಳನ್ನು ದುರಸ್ತಿ ಮಾಡಿಸುವುದು, ಮಕ್ಕಳಿಗೆ ಬೇರೆ ಶಾಲೆಯ ವ್ಯವಸ್ಥೆ ಮಾಡುವುದು ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯೂ ಇದೆ. ಆದರೆ, ಇದಾಗುತ್ತಿಲ್ಲ. ಶೇ 90ರಷ್ಟು ಅಧಿಕಾರಿಗಳಲ್ಲಿ ತಿಳಿವಳಿಕೆಯೇ ಇಲ್ಲವಾಗಿದೆ. ಅವರು ಸಹ ಪಿಡಬ್ಲ್ಯೂಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ರೀತಿಯಾಗಿದ್ದಾರೆ. ಅವರ ಮೂರ್ಖತನದಿಂದಾಗಿ ಈ ಸಮಸ್ಯೆಯಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಗಮನಿಸಬೇಕು’ ಎಂದರು.
‘ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ಮೊಟ್ಟೆ, ಹಾಲು, ಬಾಳೆಹಣ್ಣು ವಿತರಿಸುವುದು ಶಿಕ್ಷಕರ ಕೆಲಸವಲ್ಲ. ಮಕ್ಕಳಿಗೆ ಬೋಧನೆ ಬಿಟ್ಟು, ಬೇರೆ ಯಾವ ಹೊಣೆಗಾರಿಕೆಯೂ ಶಿಕ್ಷಕರಿಗೆ ಇರಬಾರದು. ಅದಕ್ಕಾಗಿಯೇ ಬೇರೆ ಸಿಬ್ಬಂದಿ ನೇಮಿಸಬೇಕು’ ಎಂದರು.
‘ಖಾಸಗಿ ಶಾಲೆ, ಕಾಲೇಜುಗಳನ್ನು ಆರಂಭಿಸುವವರು ಸರ್ಕಾರದ ಸೂಚನೆ, ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ಆದರೆ, ಇದಾಗಿಲ್ಲ. ಕೆಲವೆಡೆ ನಿಯಮ ಉಲ್ಲಂಘಿಸಿ, ಸರ್ಕಾರಿ ಶಾಲೆ, ಕಾಲೇಜುಗಳ ಸುತ್ತಮುತ್ತ ಖಾಸಗಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.