ಧಾರವಾಡದಲ್ಲಿ ನಡೆದ ವಿಪ್ರೋತ್ಸವದಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿದರು
ಧಾರವಾಡ: ‘ಮಕ್ಕಳು ಬದುಕಿನಲ್ಲಿ ಯಶಸ್ವಿಯಾಗಲು ಪೋಷಕರು ಅವರಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು’ ಎಂದು ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಯಾಲಕ್ಕಿಶೆಟ್ಟರ ಕಾಲೊನಿಯ ಶೃಂಗೇರಿ ಶಂಕರಾಚಾರ್ಯ ಮಠದ ವಿದ್ಯಾಭಾರತೀ ಸಭಾಭವನದಲ್ಲಿ ಬುಧವಾರ ನಡೆದ ಅಖಿಲ ಕರ್ನಾಟಕ ರಾಜ್ಯಮಟ್ಟದ ಶುಕ್ಲ ಯಜುರ್ವೇದಿಯರ ರಾಜ್ಯಮಟ್ಟದ ವಿಪ್ರೋತ್ಸವದಲ್ಲಿ ಮಾತನಾಡಿದರು.
‘ಸಂಸ್ಕಾರ ಕಲಿಸುವುದರಿಂದ ಮಕ್ಕಳ ಮನಸ್ಸು ದೃಢವಾಗುತ್ತದೆ. ಅವರಿಗೆ ಅಧ್ಯಯನ ಮಾಡಲು ಪ್ರೇರಣೆ ನೀಡುತ್ತದೆ. ಉತ್ತಮ ಸಂಸ್ಕಾರ ಕಲಿತ ಮಕ್ಕಳು, ಪೋಷಕರನ್ನು ವೃದ್ಧಾಪ್ಯದಲ್ಲಿ ಆರೈಕೆ ಮಾಡುತ್ತಾರೆ. ದೇಶದ ಪರಂಪರೆಯನ್ನು ಮಕ್ಕಳಿಗೆ ತಿಳಿಸಬೇಕು. ಸಂಸ್ಕಾರ ಕ್ರಮ ಮತ್ತು ಶಿಸ್ತು ರೂಢಿಸಬೇಕು’ ಎಂದರು.
‘ನಮ್ಮ ಪರಂಪರೆಯ ದಾರಿಯಲ್ಲಿ ಮುನ್ನಡೆಯಬೇಕು. ಶ್ರದ್ಧೆಯಿಂದ ಸಾಗಿದರೆ ಯಶಸ್ಸು ಸಿಗುತ್ತದೆ’ ಎಂದು ತಿಳಿಸಿದರು.
ಅಖಿಲ ಭಾರತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಮಹಾಸಭೆಯ ನಿಧಿ ಉದ್ಘಾಟನೆ ನೆರವೇರಿಸಿದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಕೆ.ಕುಲಕರ್ಣಿ, ಕಾರ್ಯಾಧ್ಯಕ್ಷ ಸಿ.ಆರ್.ಜೋಶಿ, ಶಂಕರ ಭಟ್ ಜೋಶಿ, ಅನಂತ ಕುಲಕರ್ಣಿ, ವೆಂಕಟೇಶ ಶಿವಪೂಜಿ, ಸಿ.ಎಂ.ದೀಕ್ಷಿತ, ಅಶೋಕ ಕುಲಕರ್ಣಿ, ಮಹಾಬಳೇಶ ಜೋಶಿ, ರಮೇಶ ಭಟ್ಟ, ಎಲ್.ಸಿ.ಕುಲಕರ್ಣಿ, ಉಮೇಶ ಪಾಟೀಲ, ಶಂಕರ ಪಾಟೀಲ ಇದ್ದರು.
‘ಯುವಜನರು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಮಾಜದ ಹಿರಿಯರು ಮಾರ್ಗದರ್ಶನ ನೀಡಬೇಕು. ಅವರು ಆರ್ಥಿಕವಾಗಿ ಸದೃಢರಾಗುವಂತೆ ಮಾಡಬೇಕು’ ಎಂದು ಅಖಿಲ ಭಾರತ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋವಿಂದ ಕುಲಕರ್ಣಿ ಹೇಳಿದರು.
ವಿಪ್ರೋತ್ಸವದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದಲ್ಲಿ ಸಾವಿರಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಇದ್ದಾರೆ. ಸಮುದಾಯದ ಯುವಜನರಿಗೆ ನವೋದ್ಯಮ ಘಟಕ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ’ ಎಂದರು.
‘ಈಗಾಗಲೇ ಹಲವರು ಉದ್ಯೋಗಗಳಲ್ಲಿ ತೊಡಗಿಕೊಂಡಿದ್ಧಾರೆ. ಮುಂದಿನ 10 ವರ್ಷಗಳಲ್ಲಿ ಒಂದು ಲಕ್ಷ ಯುವಜನರಿಗೆ ಸ್ವಉದ್ಯೋಗ ಕಲ್ಪಿಸುವ ಗುರಿ ಇದೆ’ ಎಂದು ತಿಳಿಸಿದರು.
ಕೆಂಗೇರಿ ಮುರಗೋಡ ಚಿದಂಬರ ಮಠದ ದಿವಾಕರ ದೀಕ್ಷಿತ್ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.