ಹುಬ್ಬಳ್ಳಿ: ‘ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡಲು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷ ನಿರ್ಧರಿಸಿದೆ’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ, ಧಾರವಾಡ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಈ ಹಿಂದೆ ಅಧಿಕಾರ ನಡೆಸಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳೂ ಜನ ವಿರೋಧಿ ನೀತಿಗಳನ್ನೇ ಅನುಸರಿಸಿವೆ. ಪರ್ಯಾಯ ಜನಪರ ಚಳವಳಿ ಹಾಗೂ ಜನರ ಕಷ್ಟಗಳಿಗೆ ಧ್ವನಿಯಾಗುವ ವ್ಯಕ್ತಿಗಳ ಅಗತ್ಯವಿದೆ. ಅಂಥ ಭರವಸೆಯನ್ನು ಹೋರಾಟದ ಹಿನ್ನೆಲೆಯ ಬಸವರಾಜ ಗುರಿಕಾರ ಮೂಡಿಸಿದ್ದಾರೆ’ ಎಂದರು.
‘ನಿರುದ್ಯೋಗಿ ಯುವಕರ ಪರ ಪರಿಷತ್ತಿನ ಒಳಗೆ ಹಾಗೂ ಪರಿಷತ್ತಿನ ಹೊರಗೆ ಮೊಳಗಿಸುವ, ಪ್ರಗತಿಪರ ಚಿಂತನೆಗಳಾಧಾರಿತ ಮೌಲ್ಯ ಉಳಿಸಿಕೊಳ್ಳುವ ಮತ್ತು ಯಾವ ಪಕ್ಷಗಳ ಆಮಿಷಕ್ಕೂ ಬಲಿಯಾಗುವುದಿಲ್ಲ ಎಂಬ ಭರವಸೆಯನ್ನು ಗುರಿಕಾರ ಮೂಡಿಸಿದ್ದಾರೆ. ಹೀಗಾಗಿ ಅವರನ್ನು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಪದವೀಧರ ಮತದಾರರಲ್ಲಿ ಮನವಿ ಮಾಡುತ್ತೇವೆ’ ಎಂದರು.
ಎಸ್ಯುಸಿಐ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಸೆಕ್ರೆಟ್ರಿಯೇಟ್ ಸದಸ್ಯರಾದ ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗನ್ನವರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಭವಾನಿ ಶಂಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.