ಹುಬ್ಬಳ್ಳಿ: ಪ್ರತಿ ವ್ಯಕ್ತಿಯ ಸಾಧನೆಯ ಹಿಂದೆ ಶಿಕ್ಷಕರ ಅವಿರತ ಶ್ರಮವಿದ್ದು, ಅವರು ಸುಂದರ ಹಾಗೂ ಸುಶಿಕ್ಷಿತ ಸಮಾಜದ ನಿರ್ಮಾತೃಗಳು ಎಂದು ಶಾಸಕ ಪ್ರಸಾದ ಅಬ್ಬಯ್ಯ ಬಣ್ಣಿಸಿದರು.
ಇಲ್ಲಿನ ಬಿಡ್ನಾಳದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನದ ಕಾರ್ಯಕ್ರಮದಲ್ಲಿ 2020-21ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಮಂಜುನಾಥ ಎಚ್. ಜಂಗಳಿ ಅವರಿಗೆ ಸನ್ಮಾನಿಸಿದರು.
‘ಶಿಕ್ಷಕರಿಲ್ಲದ ಶಿಕ್ಷಣವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಮನೆಯಲ್ಲಿ ಮಕ್ಕಳ ಲಾಲನೆ-ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ಮಕ್ಕಳ ಬೌದ್ಧಿಕ ಜ್ಞಾನ ಅಷ್ಟೇ ಮುಖ್ಯ. ಶಾಲೆಯ ಎಲ್ಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಸಮಾನ ರೀತಿಯಲ್ಲಿ ಭಾವಿಸಿ, ಶಿಕ್ಷಣ ನೀಡುವವರೇ ಆದರ್ಶ ಶಿಕ್ಷಕರಾಗಲು ಸಾಧ್ಯ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ಲಕ್ಷ್ಮೀಬಾಯಿ ಯಮನೂರು ಜಾಧವ, ವಿಜುನಗೌಡ ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ. ಮಡಿವಾಳರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶೌಕತ್ ಅಲಿ ತುಗ್ಗಾನಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.