ADVERTISEMENT

‘ಅಮ್ಮ’ನಾದ ಬಳಿಕ ಮೊದಲ ಪದಕದ ಪುಳಕ

ಐದು ಪದಕ ಗೆದ್ದ ಕಾಶಿ ಪಟ್ನದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸೌಮ್ಯಾ

ಪ್ರಮೋದ್
Published 2 ಮಾರ್ಚ್ 2020, 19:45 IST
Last Updated 2 ಮಾರ್ಚ್ 2020, 19:45 IST
ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾನುವಾರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಕೆ. ಸೌಮ್ಯಾ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ 
ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾನುವಾರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಕೆ. ಸೌಮ್ಯಾ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ    

ಧಾರವಾಡ: ಮದುವೆಯಾದ ಬಳಿಕ ಕ್ರೀಡೆಯೇ ಬೇಡವೆಂದು ದೂರ ಉಳಿದಿದ್ದಶಿಕ್ಷಕಿ ಕೆ. ಸೌಮ್ಯಾ ಮನೆಯವರ ಒತ್ತಾಸೆಗೆ ಮತ್ತೆ ಕ್ರೀಡೆಗಳಲ್ಲಿ ಪಾಲ್ಗೊಂಡರು. ‘ಅಮ್ಮ’ನಾದ ಬಳಿಕ ಮೊದಲ ಬಾರಿಗೆ ಭಾಗವಹಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಐದು ಪದಕಗಳ ಒಡತಿಯಾದರು!

ಪೇಢಾನಗರಿಯಲ್ಲಿ ಭಾನುವಾರ ಮುಕ್ತಾಯವಾದಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿರುವ ಸೌಮ್ಯಾದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಾಶಿ ಪಟ್ನದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇದಕ್ಕೂ ಮೊದಲು ನೆಲಮಂಗಲ ತಾಲ್ಲೂಕಿನ ದೊಡ್ಡಬೆಲೆಯಲ್ಲಿ ಶಿಕ್ಷಕಿಯಾಗಿದ್ದ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಕಾಶಿ ಪಟ್ನಕ್ಕೆ ವರ್ಗಾವಣೆಯಾಗಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟುವಿನಲ್ಲಿ ನೆಲೆಸಿದ್ದಾರೆ.

2015ರಲ್ಲಿ ಮಂಡ್ಯದಲ್ಲಿ ನಡೆದಿದ್ದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸೌಮ್ಯಾಕೊನೆಯ ಬಾರಿಗೆ ಭಾಗವಹಿಸಿ ಐದು ಚಿನ್ನದ ಪದಕಗಳನ್ನು ಪಡೆದಿದ್ದರು. ಇದಾಗ ಬಳಿಕ ಮದುವೆ ಹಾಗೂ ಮಗುವಿನ ಕಾರಣಕ್ಕಾಗಿ ಕ್ರೀಡೆಯಿಂದ ದೂರ ಉಳಿದಿದ್ದರು. ಈಗ ಇಲ್ಲಿ 35ರಿಂದ 45 ವರ್ಷದ ಒಳಗಿನವರ 400 ಮೀಟರ್‌ ಓಟದಲ್ಲಿ ಚಿನ್ನ, 200 ಮೀಟರ್ ಓಟದಲ್ಲಿ ಬೆಳ್ಳಿ, ಲಾಂಗ್‌ಜಂಪ್‌ನಲ್ಲಿ ಕಂಚು, 4X100 ಮೀ. ರಿಲೆಯಲ್ಲಿ ಚಿನ್ನ ಮತ್ತು 4X400 ಮೀ. ರಿಲೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ADVERTISEMENT

ಸರ್ಕಾರಿನೌಕರರ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಸೌಮ್ಯಾ 2010ರಲ್ಲಿ ಹರಿಯಾಣದಪಂಚಕುಲದಲ್ಲಿ ಮೂರು, 2012ರಲ್ಲಿ ಭೋಪಾಲ್‌ನಲ್ಲಿ ಮೂರು, 2012ರಲ್ಲಿ ಚೆನ್ನೈನಲ್ಲಿ ಎರಡು ಮತ್ತು 2016ರಲ್ಲಿ ಪುಣೆಯಲ್ಲಿ ಒಂದು ಪದಕಗಳನ್ನು ಗೆದ್ದಿದ್ದರು.

ಈ ಸಾಧನೆಯ ಖುಷಿಯನ್ನು‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಸೌಮ್ಯಾ ‘ಶಿಕ್ಷಕಿಯಾದ ಬಳಿಕ 2007ರಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ನಡೆದಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಜಯಿಸಿದ್ದೆ. ಮತ್ತೆ ಇದೇ ಊರಿನಲ್ಲಿ ಕ್ರೀಡಾಕೂಟ ಇದ್ದ ಕಾರಣ ಪಾಲ್ಗೊಳ್ಳುವ ಆಸೆಯಿತ್ತು. ಆದರೆ, ಎರಡೂವರೆ ವರ್ಷಗಳ ಹಿಂದೆ ಸಿಸೇರಿಯನ್‌ ಹೆರಿಗೆಯಾಗಿದ್ದರಿಂದ ಅಷ್ಟೊಂದು ದೈಹಿಕ ಸಾಮರ್ಥ್ಯ ಇರಲಿಲ್ಲ. ಆದರೆ, ಅಪ್ಪ ಲಕ್ಷ್ಮಣಗೌಡ, ಅಮ್ಮ ಪಾರ್ವತಿ ಮತ್ತು ಪತಿ ಜಗದೀಶ್ ಧೈರ್ಯ ತುಂಬಿದರು’ ಎಂದರು.

‘ಇಂದಬೆಟ್ಟುವಿನಿಂದ ಶಾಲೆಗೆ ಹೋಗಿಬರಲು ನಿತ್ಯ90 ಕಿ.ಮೀ. ಪ್ರಯಾಣ ಮಾಡಬೇಕಾದ್ದರಿಂದ ಅಭ್ಯಾಸಕ್ಕೆ ಹೆಚ್ಚು ಸಮಯ ಸಿಗಲಿಲ್ಲ.ಕೆಲ ದಿನಗಳ ಹಿಂದೆಯಷ್ಟೇ ಉಜಿರೆಯಎಸ್‌ಡಿಎಂ ಕಾಲೇಜು ಮೈದಾನದಲ್ಲಿ ಕೋಚ್‌ ಸಂದೇಶ್ ಪೂಂಜಾಸರ್‌ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದೆ. ಇದರಿಂದ ಪದಕ ಗೆಲ್ಲುವ ಭರವಸೆ ಮೂಡಿತು.ಕಾಶಿ ಪಟ್ನದ ಶಾಲೆಗೆ ವರ್ಗವಾಗಿ ಹೋದ ಬಳಿಕ ಅಲ್ಲಿನ ಸಹದ್ಯೋಗಿಗಳುತೋರಿದ ಪ್ರೀತಿ, ವಿಶ್ವಾಸ ನನ್ನ ಸಾಧನೆಗೆ ಪ್ರೇರಣೆಯಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.