ಹುಬ್ಬಳ್ಳಿ: ಅರೆಬರೆ ಸುಟ್ಟ ರುಂಡ ಹಾಗೂ ಕೈ, ಕಾಲು ಕತ್ತರಿಸಿದ ದೇಹದ ಭಾಗ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕವಾಗಿ ದೊರೆತ ಪ್ರಕರಣ ಭೇದಿಸಲು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನ್ರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ಜಂಟಿ ಕಾರ್ಯಾಚರಣೆ ಹಮ್ಮಿಕೊಂಡಿವೆ.
ಪ್ರಕರಣ ಪತ್ತೆಗೆ ಡಿಸಿಪಿ, ಎಸಿಪಿ, ಡಿವೈಎಸ್ಪಿ, ಐವರು ಇನ್ಸ್ಪೆಕ್ಟರ್ ಸೇರಿ ಒಟ್ಟು 80 ಮಂದಿ ಸಿಬ್ಬಂದಿಯ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಅರೆಬರೆ ಸುಟ್ಟ ದೇಹದ ಭಾಗವನ್ನು ಕಿಮ್ಸ್ ಶವಾಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಡಿಎನ್ಎ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ಎರಡೂ ಪ್ರಕರಣಗಳು ಒಂದೆಯೇ ಎಂಬ ವರದಿಗೆ ಪೊಲೀಸರು ಎದುರು ನೋಡುತ್ತಿದ್ದಾರೆ.
‘ಇತ್ತೀಚೆಗೆ ನಾಪತ್ತೆಯಾದ ಪ್ರಕರಣಗಳ ಮಾಹಿತಿಯನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಂದ ಸಂಗ್ರಹಿಸಲಾಗುತ್ತಿದೆ. ರುಂಡ ಅರೆಬರೆ ಸುಟ್ಟಿರುವುದರಿಂದ ವ್ಯಕ್ತಿ ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ತಿಳಿಸಿದರು.
ಏನಿದು ಪ್ರಕರಣ? ಹುಬ್ಬಳ್ಳಿ ತಾಲ್ಲೂಕಿನ ದೇವರಗುಡಿಹಾಳ ಗ್ರಾಮದ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಸೋಮವಾರ ಪುರುಷ ಮೃತ ವ್ಯಕ್ತಿಯ ದೇಹವಿಲ್ಲದ ರುಂಡ ಪತ್ತೆಯಾಗಿತ್ತು. ಅದೇ ದಿನ ರಾತ್ರಿ ಕೇಶ್ವಾಪುರದ ಸಂಸ್ಕಾರ ಸ್ಕೂಲ್ ಹಿಂಭಾಗದ 100 ಅಡಿ ರಸ್ತೆಯಲ್ಲಿ ರುಂಡ, ಕೈ–ಕಾಲುಗಳು ಇಲ್ಲದ ಪುರುಷ ವ್ಯಕ್ತಿಯ ಮೃತ ದೇಹ ಪತ್ತೆಯಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆ ಮತ್ತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
‘ಚೀಲದಲ್ಲಿ ಕೈ, ಕಾಲು ಕತ್ತರಿಸಿದ ವ್ಯಕ್ತಿಯ ದೇಹ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.