ADVERTISEMENT

ಟೈಕಾನ್‌ ಉದ್ಯಮಶೀಲ ಸಮಾವೇಶ 25ರಿಂದ

ಉದ್ಯಮಿಗಳು, ನವೋದ್ಯಮಿಗಳು ಭಾಗಿ, ವಿದೇಶದಿಂದಲೂ ಬರಲಿದ್ದಾರೆ ಅತಿಥಿಗಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 11:08 IST
Last Updated 22 ಜನವರಿ 2019, 11:08 IST

ಹುಬ್ಬಳ್ಳಿ: ಉದ್ಯಮಿಗಳು ಹಾಗೂ ನವೋದ್ಯಮಿಗಳ ನಡುವೆ ಸಂಪರ್ಕ ಬೆಸೆಯಲು ವೇದಿಕೆ ಎನಿಸಿರುವ ಟೈಕಾನ್‌ ಉದ್ಯಮಶೀಲ ಸಮಾವೇಶದ ಎಂಟನೇ ಆವೃತ್ತಿ ಜ. 25 ಮತ್ತು 26ರಂದು ನಗರದ ಡೆನಿಸನ್‌ ಹೋಟೆಲ್‌ನಲ್ಲಿ ನಡೆಯಲಿದೆ.

ಮೊದಲ ದಿನ ಮಹಿಳಾ ಸಮಾವೇಶ, ಎರಡನೇ ದಿನ ಟೈಕಾನ್‌ ಸಂಬಂಧಿತ ಕಾರ್ಯಕ್ರಮಗಳು ಜರುಗಲಿವೆ.

ಹುಬ್ಬಳ್ಳಿ ಸಮಾವೇಶದ ಅಧ್ಯಕ್ಷ ಶಶಿಧರ್‌ ಶೆಟ್ಟರ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಭಾರತದ ಯಶಸ್ವಿ ಉದ್ಯಮಿಗಳು, ಉನ್ನತ ವೃತ್ತಿಪರರು, ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ‘ಹೊಸ ಬದಲಾವಣೆ’ ಎಂಬುದು ಈ ಬಾರಿಯ ಸಮಾವೇಶದ ಮೂಲ ಧ್ಯೇಯ ಆಗಿದೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ವೃತ್ತಿಪರತೆ ಮೈಗೂಡಿಸಿಕೊಳ್ಳುವುದು, ಕೌಶಲಕ್ಕೆ ಆದ್ಯತೆ ನೀಡಲು ಪ್ರೇರೇಪಿಸುವುದು ಸಮಾವೇಶದ ಉದ್ದೇಶ’ ಎಂದರು.

ADVERTISEMENT

ಮಹಿಳಾ ಸಮಾವೇಶದ ಸಂಚಾಲಕಿ ಡಾ. ಮಹಿಮಾ ದಾಂಡ್‌ ಮಾತನಾಡಿ ‘ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮಹಿಳಾ ಸಮಾವೇಶ ಮಾಡಲಾಗುತ್ತಿದೆ. ದೆಹಲಿ ಎಫ್‌ಯುಸಿಸಿಐ ಸ್ಟಾರ್ಟ್‌ ಅಪ್‌ ಸಮಿತಿ ಸಹ ಅಧ್ಯಕ್ಷ ಉಲ್ಲಾಸ್‌ ಕಾಮತ್‌, ಆರ್‌.ಆರ್‌. ಕಾಬೆಲ್‌ ಗ್ರೂಪ್‌ನ ಮುಖ್ಯಸ್ಥ ಸುಮಿತ್‌ ಕಾಬ್ರಾ, ಮ್ಯಾನೇಜ್‌ಮೆಂಟ್‌ ಗುರು ಬೋಮನ್‌ ಮೊರಾಡಿಯನ್‌, ಸ್ಟಾಟ್ ಡ್ರಾಫ್ಟ್‌ನ ಸಹ ಸಂಸ್ಥಾಪಕ ಶಶಾಂಕ್‌ ಬಿಜಾಪುರ, ಇಥ್ರಿಯಲ್‌ ತಂತ್ರಗಳು ಸಹ ಸಂಸ್ಥಾಪಕ ಕೌಶಿಕ್‌ ಮುಡ್ಡ, ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಟ್ಯಾಲೆಂಟ್ ಸ್ಮಿತ್‌ ಕನ್ಸಲ್ಟಿಂಗ್‌ನ ಸಂಸ್ಥಾಪಕ ಡಾ. ಪ್ರಮೋದ್‌ ಸದಾರ್‌ಜೋಶಿ, ಡಾ. ಊಶಿ ವಿಸ್ಡಮ್‌ ವರ್ಕ್ಸ್‌ನ ಸಿಇಒ ಡಾ. ಉಶಿ ಮೋಹನದಾಸ್‌, ಬಾರ್ಟೆಂಡರ್‌ ಅಕಾಡೆಮಿಯ ಮುಖ್ಯಸ್ಥೆ ಶತ್ಬಿ ಬಸು, ಹೇ ದೀದಿ ಸಂಸ್ಥೆ ಸಂಸ್ಥಾಪಕಿ ರೇವತಿ ರಾಯ್‌ ಮತ್ತು ಬಾಂಗ್ಲಾದೇಶದ ರೂಬಾಬಾ ದಬಾಲ ಪಾಲ್ಗೊಳ್ಳಲಿದ್ದಾರೆ.

ಮೊದಲ ದಿನದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ₹ 500 ಮತ್ತು ಎರಡೂ ದಿನ ಭಾಗವಹಿಸಲು ₹ 1800 ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಆಸಕ್ತರು www.tieconhubli.com ಮೂಲಕ ಹೆಸರು ನೋಂದಾಯಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್‌ ಆಕರ್ಷಣೆ
ಜ. 26ರಂದು ಸಂಜೆ 5 ಗಂಟೆಗೆ ಇಶಾ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಪಾಲ್ಗೊಳ್ಳಲಿರುವ ಕಾರ್ಯಕ್ರಮ ಸಮಾವೇಶದ ಆಕರ್ಷಣೆ ಎನಿಸಿದೆ.

‘ಮಧ್ಯಾಹ್ನ 2.30ಕ್ಕೆ ಗೇಟ್‌ಗಳನ್ನು ತೆರೆಯಲಾಗುತ್ತದೆ. ಕನಿಷ್ಠ ಆರು ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ಬರುವವರು ಒಂದು ಗಂಟೆ ಮೊದಲೇ ಬರಬೇಕು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಸರಿಯಾಗಿ ಐದು ಗಂಟೆಗೆ ಸದ್ಗುರುಗಳ ಭಾಷಣ ಆರಂಭವಾಗುತ್ತದೆ’ ಎಂದು ಶಶಿಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.