ಹುಬ್ಬಳ್ಳಿ: ಯುಗಾದಿ ಹಬ್ಬದ ಖರೀದಿ ಭರಾಟೆ ಹುಬ್ಬಳ್ಳಿಯಲ್ಲಿ ಶುಕ್ರವಾರ ಜೋರಾಗಿತ್ತು. ದುರ್ಗದಬೈಲ್, ಕೊಪ್ಪಿಕರ್ ರಸ್ತೆ, ದಾಜಿಬಾನ ಪೇಟೆಯಲ್ಲಿ ಜನಜಂಗುಳಿ ಇತ್ತು. ಈ ಬಾರಿ ಹೂ ಹಾಗೂ ಹಣ್ಣಿನ ಬೆಲೆ ಸ್ವಲ್ಪ ಕಡಿಮೆ ಇದ್ದ ಕಾರಣ ಜನರು ಖರೀದಿಸಲು ಇನ್ನಷ್ಟು ಉತ್ಸಾಹ ತೋರಿಸಿದರು.
ದುರ್ಗದಬೈಲ್ ಮಾರ್ಕೆಟ್ನಲ್ಲಿ ಹಣ್ಣು– ಹೂ, ತರಕಾರಿಗೆ ಭಾರಿ ಬೇಡಿಕೆ ಇತ್ತು. ಸಿಹಿ ತಿಂಡಿ ಹಾಗೂ ಪೂಜಾ ಸಾಮಾಗ್ರಿ ಖರೀದಿಸಲು ಸಹ ಜನರು ಮುಗಿಬಿದ್ದರು. ಜವಳಿ ಅಂಗಡಿ ಹಾಗೂ ಗಾರ್ಮೆಂಟ್ಸ್ಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇದ್ದರು. ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿಗಳು ಗೊಣಗಿದರೆ, ಬೆಲೆ ಇನ್ನಷ್ಟು ಕಡಿಮೆ ಇದ್ದರೆ ಹೆಚ್ಚು ಖರೀದಿಸಬಹುದಿತ್ತು ಎಂಬುದು ಗ್ರಾಹಕರ ಅಂಬೋಣ.
ಒಂದು ಕೆ.ಜಿ. ಸೇಬಿನ ಬೆಲೆ ₹ 140, ದ್ರಾಕ್ಷಿ ₹ 60, ಏಲಕ್ಕಿ ಬಾಳೆ ಹಣ್ಣು ಕೆ.ಜಿಗೆ ₹ 60, ದಾಳಿಂಬೆ ಕೆ.ಜಿಗೆ ₹ 80 ಇತ್ತು. ಸಾಮಾನ್ಯವಾಗಿ ಹಬ್ಬದ ಹಿಂದಿನ ದಿನಗಳ ಬೆಲೆಗೆ ಹೋಲಿಸಿದರೆ ಇದು ಕಡಿಮೆ ಎಂದು ವ್ಯಾಪಾರಿಗಳು ತಿಳಿಸಿದರು. ತರಕಾರಿ ಬೆಲೆಗಳು ಸಹ ತೀರಾ ಹೆಚ್ಚೇನೂ ಇರಲಿಲ್ಲ. ಬದನೆಕಾಯಿ ಕೆ.ಜಿಗೆ ₹40, ಬೀನ್ಸ್ ₹ 80 ಹಾಗೂ ಟೊಮೆಟೊ ಕೆ.ಜಿಗೆ ₹12 ಇತ್ತು. ಸೇವಂತಿಗೆ ಮಾರಿಗೆ ₹30, ಮಲ್ಲಿಗೆ ₹60 ಹಾಗೂ ಸೇವಂತಿಗೆ ₹ 30 ಇತ್ತು.
‘ಮಳೆ ಇಲ್ಲ, ಬರಗಾಲ ಬಿದ್ದಿರುವುದರಿಂದ ಮಂದಿ ಬಳಿ ರೊಕ್ಕಾ ಇಲ್ಲ. ಆದ್ದರಿಂದ ವ್ಯಾಪಾರ ತುಂಬ ಕಡಿಮೆ ಇದೆ’ ಎನ್ನುತ್ತಾರೆ ಮಹೇಶ್ ಹಂಜಿಗೆ.
ಯುಗಾದಿ ಹಬ್ಬವಾದರೂ ಆ ಮಟ್ಟಿನ ವ್ಯಾಪಾರ ಇಲ್ಲ. ಹಾಕಿದ ಬಂಡವಾಳ ಬಂದರೂ ಸಾಕು ಎನ್ನುವ ಸ್ಥಿತಿ ಇದೆ’ ಎಂದರು ಇಸೂಲ್.
ಹಬ್ಬದ ಹಿಂದಿನ ದಿನ ಸಾಮಾನ್ಯವಾಗಿ ₹ 40 ಸಾವಿರ ಹೂ ಖರೀದಿಸಿ ಒಂದೇ ದಿನ ₹ 45 ಅಥವಾ ₹ 50 ಸಾವಿರ ವ್ಯಾಪಾರ ಮಾಡುತ್ತಿದ್ದೆವು. ಆದರೆ, ಈ ಬಾರಿ ವ್ಯಾಪಾರ ಬಹಳ ಕಡಿಮೆ ಇದೆ ಎನ್ನುತ್ತಾರೆ ಹೂ ವ್ಯಾಪಾರಿ ಸಲೀಂ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.