ಹುಬ್ಬಳ್ಳಿ: ‘ದೇಶದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮದೇ ಆದ ಛಾಪು ಮಾಡಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಬಣ್ಣಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದಿಂದ ವಾಜಪೇಯಿ ಅವರ 98ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಡೆದ ಸುಶಾಸನ ಹಾಗೂ ರೈತ ಸ್ಮರಣೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸುವರ್ಣ ಚತುಷ್ಪಥ ರಸ್ತೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಹೆಗ್ಗಳಿಕೆ ವಾಜಪೇಯಿ ಅವರದ್ದಾಗಿದೆ’ ಎಂದರು.
‘ಕವಿಯೂ ಆಗಿದ್ದ ವಾಜಪೇಯಿ ಅವರಿಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. 80ರ ದಶಕದಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ಪಕ್ಷವನ್ನು, ಮುಂದೆ ಪ್ರತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವಂತೆ ಮಾಡುವಲ್ಲಿ ವಾಜಪೇಯಿ ಅವರ ಕೊಡುಗೆ ದೊಡ್ಡದು. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು, ಬಲಿಷ್ಠ ರಾಷ್ಟ್ರ ಕಟ್ಟಬೇಕಿದೆ’ ಎಂದು ಕರೆ ನೀಡಿದರು.
ಪಕ್ಷದ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಜಿಲ್ಲಾ ವಕ್ತಾರ ರವಿ ನಾಯಕ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ಸಿದ್ದು ಮೊಗಲಿಶೆಟ್ಟರ, ಕೃಷ್ಣ ಗಂಡಗಾಳೇಕರ, ತೊಟಪ್ಪ ನೀಡಗುಂದಿ, ಪ್ರಶಾಂತ ಹಾವಣಗಿ, ಇರ್ಫಾನ್ ಶೇಕ್, ಮಲ್ಲಪ್ಪ ಶಿರಕೋಳ, ಮುರಗೇಶ ಹೊರಡಿ, ನಿಂಗರಾಜ ಮುಂದಿನಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.