ADVERTISEMENT

ನವಲಗುಂದ | ವರಮಹಾಲಕ್ಷ್ಮಿ ಹಬ್ಬ: ದೇವಸ್ಥಾನದಲ್ಲಿ ಮಹಿಳೆಯರಿಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 15:51 IST
Last Updated 25 ಆಗಸ್ಟ್ 2023, 15:51 IST
ನವಲಗುಂದ ಪಟ್ಟಣದ ಭವಾನೀಶಂಕರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಮಹಿಳೆಯರಿಗೆ ಉಡಿತುಂಬಲಾಯಿತು
ನವಲಗುಂದ ಪಟ್ಟಣದ ಭವಾನೀಶಂಕರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಮಹಿಳೆಯರಿಗೆ ಉಡಿತುಂಬಲಾಯಿತು   

ನವಲಗುಂದ: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಪಟ್ಟಣದ ದ್ಯಾಮವ್ವನ ಗುಡಿ ಓಣಿಯ ಭವಾನೀಶಂಕರ (ಒಡಿಕೇಶ್ವರಿ ದೇವಸ್ಥಾನ) ದೇವಸ್ಥಾನದಲ್ಲಿ ಮಹಿಳೆಯರಿಗೆ ಶುಕ್ರವಾರ ಉಡಿತುಂಬಲಾಯಿತು.

ಹಬ್ಬದಂದು ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಉಡಿ ತುಂಬುವಂತೆ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನ ನೀಡಿತ್ತು. ಅದರಂತೆ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಸುಧೀರ್ ಸಾಹುಕಾರ್ ಚಾಲನೆ ನೀಡಿದರು.

‘ನಾಡಿಗೆ ಉತ್ತಮ ಮಳೆ ಬೆಳೆ ಬರಲಿ, ಜನರ ಸುಖ ಸಮೃದ್ಧಿ ಹೆಚ್ಚಲಿ. ಎಲ್ಲರಿಗೂ ಸಂತೋಷದ ಬದುಕು ಕರುಣಿಸಲಿ’ ಎಂದು ಪ್ರಾರ್ಥಿಸಿ, ತಾಲ್ಲೂಕು ಆಡಳಿತದಿಂದ ದೇವಿಗೆ ಮಂಗಲಾಷ್ಟಕ ಸಹಿತ ಬಾಗಿನ (ಉಡಿ) ಅರ್ಪಿಸಲಾಯಿತು.

ADVERTISEMENT

ಮಹಿಳೆಯರಿಗೆ ಕಂಕಣ ಕಟ್ಟಿ, ಅರಿಶಿನ ಕುಂಕುಮ ಹಚ್ಚಿ, ಹೂವು ತೊಡಿಸಿ, ಹಸಿರು ಬಳೆ, ಹಣ್ಣು, ಕಣ, ತಾಂಬೂಲದೊಂದಿಗೆ ಉಡಿ ತುಂಬಿ ಶುಭ ಹಾರೈಸಿದರು.

ತಾಲ್ಲೂಕು ಪಂಚಾಯ್ತಿ ಇಒ ಭಾಗ್ಯಶ್ರೀ ಜಾಹಗೀರದಾರ, ಕಂದಾಯ ನೀರಿಕ್ಷಕ ಸಂಜೀವ ಲಮಾಣಿ, ನರಸಿಂಹ ಇನಾಮತಿ, ಪೂರ್ಣಿಮಾ ಜೋಶಿ, ಉಮಾ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.