ADVERTISEMENT

ಭೀತಿಯ ನಡುವೆಯೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 6:33 IST
Last Updated 1 ಆಗಸ್ಟ್ 2020, 6:33 IST
ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನ ವಿಜಯಲಕ್ಷ್ಮಿ ಕಟ್ಟಿಮಠ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಶುಕ್ರವಾರ ಆರತಿ ಬೆಳಗಿದ ಮಹಿಳೆಯರು
ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನ ವಿಜಯಲಕ್ಷ್ಮಿ ಕಟ್ಟಿಮಠ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಶುಕ್ರವಾರ ಆರತಿ ಬೆಳಗಿದ ಮಹಿಳೆಯರು   

ಹುಬ್ಬಳ್ಳಿ: ಕೊರೊನಾ ಸೋಂಕಿನ ಆತಂಕದ ನಡುವೆಯೂ ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮ ಕಂಡು ಬಂತು.

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ ಪೂಜೆಯಂದು ಗೌರಿ ಮೂರ್ತಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಐದಾರು ತರಹದ ಹಣ್ಣುಗಳು, ಹೋಳಿಗೆ, ಕಡುಬು ಸೇರಿದಂತೆ ಐದಾರು ತರಹದ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಈ ಮೊದಲು ಪ್ರತಿ ವರ್ಷ ಸಂಜೆ ಮುತೈದೆಯರನ್ನು ಮನೆಗೆ ಕರೆಯಿಸಿ ಅರಿಶಿಣ ಮತ್ತು ಕುಂಕುಮ ನೀಡುವ ಶಾಸ್ತ್ರ ಮಾಡಲಾಗುತ್ತಿತ್ತು. ಸೋಂಕಿನ ಭೀತಿ ಇರುವ ಕಾರಣ ಈ ವರ್ಷ ಹಬ್ಬದ ಆಚರಣೆ ಆಯಾ ಮನೆಗಳಿಗಷ್ಟೇ ಸೀಮಿತವಾಗಿತ್ತು.

ನಗರದ ದಾಜೀಬಾನ ಪೇಟೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಾಳೆ ದಿಂಡು ಕಟ್ಟಿ, ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇವಿಯ ದರ್ಶನ ಪಡೆದರು. ಮನೆಗಳಲ್ಲಿಯೂ ಆಚರಣೆಯ ಸಡಗರ ಕಂಡು ಬಂತು.

ADVERTISEMENT

ಮಾಸ್ಕ್‌ ಹಂಚಿಕೆ: ಸಾಂಪ್ರದಾಯಿಕ ಆಚರಣೆಯ ಜೊತೆಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಗೋಕುಲ ರಸ್ತೆಯಲ್ಲಿರುವ ಅಕ್ಷಯ ಪಾರ್ಕ್‌ನ ವಿಜಯಲಕ್ಷ್ಮಿ ಕಟ್ಟಿಮಠ ಅವರು ತಮ್ಮ ಮನೆಗೆ ಬಂದಿದ್ದವರಿಗೆ ಮಾಸ್ಕ್‌ ನೀಡಿದರು.

‘ವರಮಹಾಲಕ್ಷ್ಮಿ ಪೂಜೆಗೆ ಎರಡ್ಮೂರು ದಿನಗಳಿಂದ ತಯಾರಿ ಮಾಡಿಕೊಂಡು, ಬೆಳಿಗ್ಗೆನಿಂದಲೇ ಅಲಂಕಾರ ಹಾಗೂ ಅಡುಗೆ ಮಾಡುವ ಸಂಭ್ರಮ ಒಂದೆಡೆಯಾದರೆ, ಸಂಜೆ ಮುತೈದೆಯರನ್ನು ಮನೆಗೆ ಪೂಜೆಗೆ ಆಹ್ವಾನಿಸುವುದು ಇನ್ನೊಂದು ದೊಡ್ಡ ಸಂಭ್ರಮ. ಕೊರೊನಾ ಕಾರಣಕ್ಕೆ ಈ ಬಾರಿ ಮನೆಗೆ ಯಾರನ್ನೂ ಕರೆದಿಲ್ಲ. ಮನೆಗೆ ಬಂದಿದ್ದ ಸಂಬಂಧಿಕರಿಗೆ ಮಾಸ್ಕ್‌ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ವಿಜಯಲಕ್ಷ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.