ADVERTISEMENT

‘ವಿದ್ಯಾ ಸ್ಫೂರ್ತಿ’ ತಂತ್ರಾಂಶ ಉದ್ಘಾಟನೆ

ಎನ್‌ಡಬ್ಲ್ಯುಕೆಆರ್‌ಟಿಸಿ ನೌಕರರು, ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಅನುಕೂಲ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:05 IST
Last Updated 30 ಸೆಪ್ಟೆಂಬರ್ 2025, 6:05 IST
ಹುಬ್ಬಳ್ಳಿಯಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ವಿದ್ಯಾ ಸ್ಫೂರ್ತಿ ಯೋಜನೆಯ ತಂತ್ರಾಂಶವನ್ನು ಸೋಮವಾರ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ವಿದ್ಯಾ ಸ್ಫೂರ್ತಿ ಯೋಜನೆಯ ತಂತ್ರಾಂಶವನ್ನು ಸೋಮವಾರ ಉದ್ಘಾಟಿಸಿದರು   

ಹುಬ್ಬಳ್ಳಿ: ‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನೌಕರರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ. ಆದರೆ, ಅಲ್ಪ ಹಣದಿಂದ ಪ್ರಯೋಜನವಾಗದು. ವಿದ್ಯಾರ್ಥಿವೇತನವನ್ನು ಹೆಚ್ಚಿಸಬೇಕು’ ಎಂದು ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರು, ಅಧಿಕಾರಿಗಳ ಮಕ್ಕಳಿಗೆ ‘ವಿದ್ಯಾ ಸಹಾಯ ನಿಧಿ’ಯಿಂದ ವಿದ್ಯಾರ್ಥಿವೇತನ ನೀಡಲು ಅಭಿವೃದ್ಧಿ ಪಡಿಸಲಾದ ‘ವಿದ್ಯಾ ಸ್ಫೂರ್ತಿ’ ತಂತ್ರಾಂಶ ಉದ್ಘಾಟಿಸಿದ ಅವರು, ‘ಹಲವು ಸಮಸ್ಯೆಗಳಿದ್ದರೂ ಸಂಸ್ಥೆ ಉತ್ತಮವಾಗಿ ನಡೆದಿದೆ. ಸಂಸ್ಥೆಯ ನೌಕರರು, ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು’ ಎಂದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಮಾತನಾಡಿ, ‘ಪ್ರತಿ ವರ್ಷ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತೇವೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಿ, ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘ಐಟಿಐ, ಡಿಪ್ಲೊಮಾ, ಎಂಬಿಬಿಎಸ್‌, ಬಿಇ ಓದುತ್ತಿರುವ ನೌಕರರ ಇಬ್ಬರು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಾವು ಓದುತ್ತಿರುವ ಕೋರ್ಸ್‌ನ  ಹಿಂದಿನ ಸೆಮಿಸ್ಟರ್‌ನಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ. ಐಟಿಐ ವಿದ್ಯಾರ್ಥಿಗಳಿಗೆ ವಾರ್ಷಿಕ 5,500, ಡಿಪ್ಲೊಮಾ ₹6,000, ಬಿಇ, ಬಿ.ಟೆಕ್‌ ₹6000 ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ₹10 ಸಾವಿರ ಸಹಾಯಧನ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ವಿದ್ಯಾ ಸಹಾಯನಿಧಿಗೆ ಪ್ರತಿ ನೌಕರರಿಂದ ತಿಂಗಳಿಗೆ ₹10 ಮತ್ತು ಸಂಸ್ಥೆಯಿಂದ ₹10 ಭರಿಸಲಾಗುತ್ತಿದೆ. ಸಂಸ್ಥೆಯ 20 ಸಾವಿರ ನೌಕರರಿಂದ ಪ್ರತಿ ತಿಂಗಳು ₹4 ಲಕ್ಷ ವಂತಿಗೆ ಸಂಗ್ರಹವಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಅರ್ಜಿಗಳು ಬಂದರೆ, ವಂತಿಕೆಯನ್ನು ಹೆಚ್ಚಿಸಿಕೊಂಡು, ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿಸಲಾಗುವುದು’ ಎಂದರು.

‘ಯುಪಿಐ ಪಾವತಿ ಮೂಲಕ ಟಿಕೆಟ್ ನೀಡುವ ಪ್ರಕ್ರಿಯೆಯನ್ನು 2024ರ ಫೆ.24ರಿಂದ ಜಾರಿಯಿದೆ. ಸದ್ಯ ಶೇ 15ಕ್ಕಿಂತ ಹೆಚ್ಚು ಯುಪಿಐ ಪಾವತಿ ಆಗುತ್ತಿದೆ. ಬೇರೆ ನಿಗಮಗಳಿಗೆ ಹೋಲಿಸಿದರೆ  ತಂತ್ರಜ್ಞಾನ ಅಳವಡಿಕೆ, ಯುಪಿಐ ಪಾವತಿ, ಬಸ್‌ ಕರೀದಿ, ನೇಮಕಾತಿ ಸೇರಿ ಇನ್ನಿತರ ವಿಷಯದಲ್ಲಿ ಸಂಸ್ಥೆ ಮುಂದಿದೆ’ ಎಂದು ಹೇಳಿದರು.

ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಯುಪಿಐ ವಹಿವಾಟು ಮಾಡಿದ ನಿರ್ವಾಹಕರು, ಘಟಕಗಳು ಹಾಗೂ ವಿಭಾಗದವರಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ತಾಂತ್ರಿಕ ಎಂಜಿನಿಯರ್‌ ಸಿದ್ದೇಶ್ವರ ಹೆಬ್ಬಾಳ, ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಶಶಿಧರ ಕುಂಬಾರ, ಇಮಾಮ ಕಾಸೀಮ್ ಕಂದಗಲ್, ಜಗದಂಬಾ ಕೋಪರ್ಡೆ, ಶ್ರೀನಿವಾಸಮೂರ್ತಿ ಸಿ.ಇ, ಎಸ್.ವಿ.ಅಂಗಡಿ, ನಿತಿನ್‌ ಹೆಗಡೆ, ಎಸ್.ಜಿ.ಮರಿದೇವರಮಠ, ಸುನೀಲ್ ಎಂ., ಎಂ.ಬಿ.ಕಪಲಿ, ರವಿ ಅಂಚಿಗಾವಿ, ನವೀನಕುಮಾರ ತಿಪ್ಪಾ, ತೈಸೀನಬಾನು ಪಟವೇಗಾರ, ರವೀಶ ನಾಯ್ಕ್ ಇದ್ದರು. 

‘ಶೀಘ್ರ 300 ಕರ್ನಾಟಕ ಸಾರಿಗೆ ಬಸ್ ಖರೀದಿ’

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 300 ಬಸ್‌ಗಳ ಖರೀದಿ ಪ್ರಕ್ರಿಯೆ ವಿಳಂಬವಾಗಿದ್ದು ತಿಂಗಳಲ್ಲಿ ಟೆಂಡರ್ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಗುವುದು. ಅಗತ್ಯವಿರುವ ಡಿಪೊಗಳಿಗೆ ಬಸ್‌ ಹಂಚಿಕೆ ಮಾಡಿ ಮತ್ತೆ 400 ಬಸ್‌ಗಳನ್ನು ಖರೀದಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು. ‘ರಾಜಹಂಸ ಕರ್ನಾಟಕ ಸಾರಿಗೆ ಮತ್ತು ನಗರ ಸಾರಿಗೆ ಸೇರಿ ಸಂಸ್ಥೆಯಲ್ಲಿ ಸದ್ಯ 5230 ಬಸ್‌ಗಳಿವೆ. 14 ಎಸಿ ಸ್ಲೀಪರ್‌ ಮತ್ತು 4 ನಾನ್ ಎಸಿ ಸ್ಲೀಪರ್‌ ಬಸ್‌ ಖರೀದಿಗೆ ಟೆಂಡರ್ ಅಂತಿಮಗೊಂಡಿದ್ದು ಶೀಘ್ರ ಕಾರ್ಯಾದೇಶ ನೀಡಲಾಗುವುದು. ಅಲ್ಲದೆ 20 ಪಲ್ಲಕ್ಕಿ ನಾನ್‌ ಎಸಿ ಬಸ್‌ಗಳು ಡಿಸೆಂಬರ್‌ ಒಳಗೆ ಬರಲಿವೆ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ತಿಳಿಸಿದರು.  ಕರ್ನಾಟಕ ವಿದ್ಯತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾದರಿಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಲು ಸರ್ಕಾರ ಕರಡಿ ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.