ADVERTISEMENT

ಹುಬ್ಬಳ್ಳಿ: ಹೃದಯದ ಆರೋಗ್ಯಕ್ಕೆ ನಡಿಗೆಯೇ ಮದ್ದು

ಫೇಸ್‌ಬುಕ್‌ ಸಂವಾದದಲ್ಲಿ ಕಿಮ್ಸ್‌ ಹೃದ್ರೋಗ ತಜ್ಞ ಉಲ್ಲಾಸ ಬಿಸ್ಲೆರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 16:29 IST
Last Updated 29 ಸೆಪ್ಟೆಂಬರ್ 2022, 16:29 IST
ಡಾ.ಉಲ್ಲಾಸ ಬಿಸ್ಲೆರಿ
ಡಾ.ಉಲ್ಲಾಸ ಬಿಸ್ಲೆರಿ   

ಹುಬ್ಬಳ್ಳಿ: ‘ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಹಾಗೂ ಲಯಬದ್ಧ ಹೃದಯ ಮಿಡಿತಕ್ಕೆ ನಿತ್ಯ ಕನಿಷ್ಠ ಎರಡು ಕಿ.ಮೀ ನಡೆಯುವುದು ಅವಶ್ಯ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ತಡೆಯಲು ಸಾಧ್ಯವಿದೆ’ ಎಂದು ಕಿಮ್ಸ್‌ನ ಹೃದ್ರೋಗ ತಜ್ಞ ಡಾ.ಉಲ್ಲಾಸ ಬಿಸ್ಲೆರಿ ಸಲಹೆ ನೀಡಿದರು.

‘ವಿಶ್ವ ಹೃದಯ ದಿನ’ದ ಅಂಗವಾಗಿ ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ ಫೇಸ್‌ಬುಕ್‌ –ಲೈವ್‌ ಸಂವಾದದಲ್ಲಿ ಅವರು ಮಾತನಾಡಿದರು.

ಹೃದಯವು ನಿಮಿಷಕ್ಕೆ ಐದು ಲೀಟರ್‌ ರಕ್ತವನ್ನು ಪಂಪ್‌ ಮಾಡುತ್ತದೆ. ಓಡಿದಾಗ ಹತ್ತು ಲೀಟರ್‌ ರಕ್ತ ಪಂಪ್‌ ಮಾಡುತ್ತದೆ. ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳು ಉತ್ತಮವಾಗಿದ್ದರೆ ಹೃದಯದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ’ ಎಂದರು.

ADVERTISEMENT

ಹೃದ್ರೋಗಕ್ಕೆ ಹಲವು ಕಾರಣ: ಹೃದ್ರೋಗಕ್ಕೆ ಹಲವು ಕಾರಣಗಳಿವೆ. ವಂಶವಾಹಿನಿಯಿಂದ ಬರುವುದು, ಸಣ್ಣ ವಯಸ್ಸಿನಿಂದ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ, ಆಹಾರ ವಿಧಾನ ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡದೆ ಇರುವುದು ಸೇರಿದಂತೆ ಹಲವು ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಹೃದಯ ಸ್ತಂಭನ (ಕಾರ್ಡಿಯಾಕ್‌ ಅರೆಸ್ಟ್‌)ಆರೋಗ್ಯ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದನ್ನು ತಪ್ಪಿಸಲು ಮುಖ್ಯವಾಗಿ ನಮ್ಮ ಜೀವನ ಶೈಲಿ ಬದಲಾಗಬೇಕು. ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಬಿಡಬೇಕು, ಉತ್ತಮ ಆಹಾರ ವಿಧಾನ ರೂಢಿಸಿಕೊಳ್ಳಬೇಕು, ನಿತ್ಯ ವ್ಯಾಯಾಮ ಮಾಡಬೇಕು, ಧೂಮಪಾನ ಮಾಡಬಾರದು, ಮದ್ಯ ಸೇವನೆ ಬಿಡಬೇಕು. ಅಲ್ಲದೇ ಒತ್ತಡ ರಹಿತ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಪಾಶ್ಚಿಮಾತ್ಯ ಆಹಾರ ಶೈಲಿ ನಮಗೆ ಹೊಂದಾಣಿಕೆ ಆಗದೆಯೂ ಇರಬಹುದು. ಇದು ಸಹ ಹೃದಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.